ಸವದತ್ತಿ: ರೈತರ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ರಾಜ್ಯ ಸರ್ಕಾರ ಹೊಸ ಆದೇಶ ಖಂಡಿಸಿ ನ.10ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಹೇಳಿದರು.
ಇಲ್ಲಿನ ಎಪಿಎಂಸಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ರೈತರ ಪಂಪಸೆಟ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಟ್ರಾನ್ಸಫಾರ್ಮರ್, ಕಂಬ ಹಾಗೂ ತಂತಿಗಳ ಅಳವಡಿಕೆಗೆ ರೈತನೇ ಹಣ ವ್ಯಯಿಸುವ ದುಃಸ್ಥಿತಿ ಬಂದೊದಗಿದೆ. ಬರದ ಬೇಗೆಯಲ್ಲಿ ಬೆಂದ ರೈತನಿಗೆ ಸರ್ಕಾರ ವಿದ್ಯುತ್ ಪೂರೈಕೆಯ ಹೊಸ ಆದೇಶ ಬರೆಯಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರದ ರೈತ, ಜನ ವಿರೋಧಿ ನೀತಿಗಳಿಂದ ಜನತೆ ಬೇಸತ್ತು ಹೋಗಿದ್ದಾರೆ. ಸದ್ಯ ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ವಿಫಲವಾಗಿದೆ. ಗ್ಯಾರಂಟಿಗಳಿಂದ ಜನತೆಗೆ ಅನುಕೂಲವಾಗುವ ಬದಲು ಸಮಸ್ಯೆಯಾಗಿವೆ’ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ‘ರೈತರ ದುಃಸ್ಥಿತಿ ಹೋಗಲಾಡಿಸಲು ಹೋರಾಟ ಅನಿವಾರ್ಯವಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ನಡೆಸಬೇಕಿದೆ. ರೈತರಿಗೆ ಅನ್ಯಾಯವೆಸಗುವ ಸರ್ಕಾರದ ವಿರುದ್ಧ ಧ್ವನಿ ಎತ್ತಲೇ ಬೇಕಿದೆ. ನಾಡಿನ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಕಾಂಗ್ರೆಸ್ನಲ್ಲಿರುವ ಭಾರತೀಯರಿಗೆ ಹಿಂದೂ ಧರ್ಮದ ಕುರಿತು ಗೌರವ ನೀಡುವ ಸಂಸ್ಕೃತಿ ಇಲ್ಲದಾಗಿದೆ’ ಎಂದರು.
ಈ ವೇಳೆ ಸುಭಾಸಗೌಡ ಪಾಟೀಲ, ಈರಣ್ಣ ಚಂದರಗಿ, ಎಫ್.ಎಸ್. ಸಿದ್ದನಗೌಡರ, ಜಿ.ಎಸ್. ಗಂಗಲ ಸೇರಿ ಪ್ರಮುಖರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.