ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬೆಳೆಗಳು ಬಾಡುವ ಆತಂಕ

ಚಿಕ್ಕೋಡಿ: ಹಲವು ದಿನಗಳಿಂದ ಮಳೆ ಕೊರತೆ
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಈ ವರ್ಷದಾಗ ಅಡ್ಡಮಳಿ ಚಲೋ ಆತು. ರೋಹಿಣಿ ಮಳಿನೂ ಜೋರಾತು. ಬಿತ್ತನೆಗೆ ಭೂಮಿನೂ ಹದ ಆತು. ಭೂತಾಯಿ ಉಡಿನೂ ತುಂಬಿದಾತು. ಬಿತ್ತಿರೊ ಬೀಜಗಳೂ ಹುಲುಸಾಗೇ ಮೊಳೆಯೊಡಿವೆ. ಆದರೆ, ವಾರಾತು ಮಳಿ ಮಾಯಾ ಆಗೇತಿ. ಬೆಳಿ ಬಾಡಾಕತ್ಯಾವ್ರೀ, ಮುಗಿಲಿನತ್ತ ಮುಖಾ ಮಾಡಿ ಕುಂತೇವಿ’.

ತಾಲ್ಲೂಕಿನಲ್ಲಿ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಮಳೆಯ ಆಭಾವದಿಂದಾಗಿ ಬಾಡುತ್ತಿರುವುದನ್ನು ಕಂಡು ಕಂಗೆಟ್ಟಿರುವ ಕೃಷಿಕ ಹೇಳುತ್ತಿರುವ ಆತಂಕದ ನುಡಿಗಳಿವು.

ಮುಗಿಲಿನತ್ತ ಮುಖ: ತಾಲ್ಲೂಕಿನಲ್ಲಿ ಎರಡು ವಾರಗಳಿಂದ ಮಳೆ ಮಾಯವಾಗಿರುವುದರಿಂದ ಮೊಳಕೆಯೊಡೆದ ಬೆಳೆಗಳು ಬಾಡುತ್ತಿದ್ದು, ರೈತರು ಮಳೆರಾಯನ ಕೃಪೆಯ ನಿರೀಕ್ಷೆಯಲ್ಲಿದ್ದಾರೆ.

ಮುಂಗಾರು ಪ್ರವೇಶದ ಮುನ್ನವೇ ತಾಲ್ಲೂಕಿನಲ್ಲಿ ಬೊಗಸೆ ತುಂಬಾ ಸುರಿದ ರೋಹಿಣಿ ಮಳೆಯಿಂದ ಹದಗೊಂಡ ಭೂಮಿಯಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಆದರೆ, ಬಹುನಿರೀಕ್ಷೆಯ ಮೃಗಶಿರ ಮತ್ತು ಆರಿದ್ರಾ ಮಳೆಗಳು ಕೈಕೊಟ್ಟಿವೆ. ಮೊಳೆಯೊಡೆದ ಬೆಳೆಗಳು ಬಾಡುತ್ತಿದ್ದು, ಇದರಿಂದಾಗಿ ಕಂಗಾಲಾಗಿರುವ ಕೃಷಿಕರು ಜಾತಕ ಪಕ್ಷಿಯಂತೆ ಮುಗಿಲಿನತ್ತ ಮುಖ ಮಾಡಿದ್ದಾರೆ.

ತಾಲ್ಲೂಕಿನ ನಾಗರಮುನ್ನೋಳಿ, ಚಿಕ್ಕೋಡಿ ಹೋಬಳಿ ವ್ಯಾಪ್ತಿಯ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದಿರುವ ಶೇಂಗಾ, ಸೋಯಾಅವರೆ, ಜೋಳ ಮೊದಲಾದ ಬೆಳೆಗಳು ಮೊಳಕೆಯೊಡೆದಿದ್ದು, ಮಳೆಯ ಆಭಾವದಿಂದಾಗಿ ಬಿಸಿಲಿನಲ್ಲಿ ಬಾಡುತ್ತಿವೆ. ಈ ವಾರದಲ್ಲಿ ಮಳೆ ಆಗದೆ ಇದ್ದರೆ ಮಡ್ಡಿ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ಕಮರುವ ಆತಂಕ ಎದುರಾಗಿದೆ ಎನ್ನುತ್ತಾರೆ ರೈತರು.

ಬಿತ್ತನೆ ಮಾಹಿತಿ: ತಾಲ್ಲೂಕಿನಲ್ಲಿ ಗೋವಿನಜೋಳ, ರಾಗಿ, ಭತ್ತ 10,788 ಹೆಕ್ಟೇರ್, ಹೆಸರು, ಉದ್ದು, ಅಲಸಂದಿ ಸೇರಿದಂತೆ 12,055 ಹೆಕ್ಟೇರ್, ಶೇಂಗಾ, ಸೋಯಾಬಿನ್ ಮೊದಲಾದವುಗಳನ್ನು 23,424 ಹೆಕ್ಟೇರ್, ಹತ್ತಿ, ಕಬ್ಬು ಮೊದಲಾದ ವಾಣಿಜ್ಯ ಬೆಳೆಗಳನ್ನು 40,917 ಹೆಕ್ಟೇರ್‌ನಲ್ಲಿ ಹಾಕಲಾಗಿದೆ. ಅದರಲ್ಲಿ 55,995 ಹೆಕ್ಟೇರ್ ನೀರಾವರಿ ಪ್ರದೇಶದ ಪೈಕಿ 46,695 ಹೆಕ್ಟೇರ್ ಬಿತ್ತನೆಯಾಗಿದೆ. 33,790 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದ ಪೈಕಿ 29,701 ಹೆಕ್ಟೇರ್ ಬಿತ್ತನೆಯಾಗಿದೆ. ಒಟ್ಟು 89,785 ಹೆಕ್ಟೇರ್ ಗುರಿ ಪೈಕಿ 76,396 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ವಾರದಿಂದ ಮಳೆ ಮಾಯ; ‘ತಾಲ್ಲೂಕಿನಲ್ಲಿ ಜೂನ್ ತಿಂಗಳಿನಲ್ಲಿ ಒಟ್ಟು ಸರಾಸರಿ ಗಮನಿಸಿದರೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಚಿಕ್ಕೋಡಿಯಲ್ಲಿ ಶೇ.91ರಷ್ಟು, ನಾಗರಮುನ್ನೋಳಿ ಶೇ.52, ಸದಲಗಾ ಶೇ.81, ನಿಪ್ಪಾಣಿ ಶೇ.38ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ, ಜೂನ್ 25ರಿಂದ ಜುಲೈ 2ರವರೆಗೆ ವಾಡಿಕೆಗಿಂತ ಚಿಕ್ಕೋಡಿಯಲ್ಲಿ ಶೇ.88, ನಾಗರಮುನ್ನೋಳಿ ಶೇ.77, ಸದಲಗಾ ಶೇ.93 ಮತ್ತು ನಿಪ್ಪಾಣಿಯಲ್ಲಿ ಶೇ.94ರಷ್ಟು ಕಡಿಮೆ ಮಳೆಯಾಗಿದೆ. ಕೆಲವೇ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ’ ಎಂದು ಸಹಾಯಕ ಕೃಷಿ ನಿರ್ದೆಶಕ ಮಂಜುನಾಥ ಜನಮಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT