ಅಥಣಿ: ‘ರೋಟರಿ ಸಂಸ್ಥೆಯ ಪದಾಧಿಕಾರಿಗಳು ಅರಣ್ಯ ಇಲಾಖೆ ಸಹಯೋಗದಲ್ಲಿತಾಲ್ಲೂಕಿನಾದ್ಯಂತ ಲಕ್ಷ ಸಸಿಗಳನ್ನು ನೆಟ್ಟು, ಪೋಷಿಸಬೇಕು’ ಎಂದು ರೋಟರಿ ಜಿಲ್ಲಾ ಗವರ್ನರ್ ಗಣೇಶ ಭಟ್ ಸಲಹೆ ನೀಡಿದರು.
ಇಲ್ಲಿ ಶನಿವಾರ ನಡೆದ ರೋಟರಿ ಕ್ಲಬ್ ಅಥಣಿ ದಕ್ಷಿಣದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ನೀರು ಅಮೂಲ್ಯವಾದುದು. ಜಲಸಂಪತ್ತು ಕೊರತೆಯಾಗದಂತೆ ನೋಡಿಕೊಳ್ಳಬೇಕಾದರೆ ಅರಣ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕು. ಪ್ರತಿಯೊಬ್ಬರೂ ಒಂದು ಗಿಡವನ್ನು ದತ್ತು ಪಡೆದು ಸಂರಕ್ಷಣೆ ಮಾಡಿದರೆ ಲಕ್ಷಾಂತರ ಗಿಡ ಮರಗಳನ್ನು ಬೆಳೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರೋಟರಿ ಸದಸ್ಯರು ಕಾರ್ಯತತ್ಪರರಾಗಬೇಕು’ ಎಂದು ತಿಳಿಸಿದರು.
ರೊಟೇರಿಯನ್ ಸಂದೀಪ ಸಂಗೋರಾಮ ಮಾತನಾಡಿ, ‘ರೋಟರಿಯಿಂದ ಪ್ರಸಕ್ತ ವರ್ಷ ಕನಿಷ್ಠ 100 ಬಡ ರೋಗಿಗಳಿಗೆ ಉಚಿತವಾಗಿ ನೇತ್ರ ತಪಾಸಣಾ ಶಿಬಿರ ಆಯೋಜಿಸಬೇಕು’ ಎಂದು ಹೇಳಿದರು.
ಸಂಸ್ಥಾಪಕ ಅಧ್ಯಕ್ಷ ಸಿದ್ದಾರೂಢ ಸವದಿ ಮತ್ತು ನೂತನ ಅಧ್ಯಕ್ಷ ರಾಮಣ್ಣ ಧರಿಗೌಡರ ಮಾತನಾಡಿದರು. ಕಾರ್ಯದರ್ಶಿಯಾಗಿ ಸುರೇಶ ಚಿಕ್ಕಟ್ಟಿ ಮತ್ತು ಖಜಾಂಚಿಯಾಗಿ ಸಿದ್ದರಾಜ ಬೋರಾಡೆ ಪದಗ್ರಹಣ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಡಿ.ಡಿ. ಮೇಕನಮರಡಿ, ರೊಟೇರಿಯನ್ಗಳಾದ ಅನಂತ ಬಸರಿಕೋಡಿ, ಶ್ರೀಕಾಂತ ಮಾಕಾಣಿ, ಸಿದ್ದರಾಜ ಬೋರಾಡಿ, ಪಿ.ಜಿ. ಬೋರ್ಗೇಕರ ಇದ್ದರು.