‘ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಿದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮುಂದಿನ ಐದು ವರ್ಷ ಹೋರಾಟ ಬಿಟ್ಟರೆ ಅವರಿಗೆ ಇನ್ನೇನು ಕೆಲಸವಿದೆ? ಹೋರಾಟ ಹೋರಾಟ ಗೆಲ್ಲುವವರೆಗೆ ಹೋರಾಟ... ಎಂಬ ಫಲಕವನ್ನು ಬರೆದಿಡಬೇಕು. ಅವರಿಗೆ ಅಭಿವೃದ್ಧಿಯಂತೂ ಗೊತ್ತಿಲ್ಲ. ಕೋಮು ದ್ವೇಷ ಹರಡುವುದು, ಗಲಾಟೆ ಮಾಡುವುದು ಮತ್ತು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟುವುದೇ ಬಿಜೆಪಿಯವರ ಕೆಲಸ’ ಎಂದು ತಿರುಗೇಟು ಕೊಟ್ಟರು.
‘ಎಮ್ಮೆ, ಕೋಣ ಕಡಿಯುವುದಾದರೆ ಹಸು ಏಕೆ ಕಡಿಯಬಾರದು?’ ಎಂಬ ಪಶುಸಂಗೋಪನಾ ಇಲಾಖೆ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ, ‘ಸಚಿವರ ಹೇಳಿಕೆ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶವಿದೆ. ಸಾಧಕ–ಬಾಧಕ ಅಂಶಗಳನ್ನು ಪರಿಗಣಿಸಿ, ನಂತರ ನಿರ್ಣಯ ಕೈಗೊಳ್ಳಲಾಗುತ್ತದೆ. ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲೂ ಸರ್ಕಾರ ಯೋಗ್ಯ ನಿರ್ಣಯ ತೆಗೆದುಕೊಳ್ಳಲಿದೆ’ ಎಂದರು.
‘ತಾವು ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಉತ್ತಮ ಕೆಲಸ ಮಾಡಲಿಲ್ಲ. ಈಗ ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ. ಈಗ ನಮ್ಮ ಪಕ್ಷದವರು ಏನೇ ಹೇಳಿಕೆ ಕೊಟ್ಟರೂ ದುರುದ್ದೇಶದಿಂದ ವಿರೋಧಿಸುವುದು ಸರಿಯಲ್ಲ’ ಎಂದು ತಿವಿದರು.