ಬೆಳಗಾವಿ: ನಗರದಲ್ಲಿ ಗುರುವಾರ ನಡೆದ 36 ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಹಾಗೂ 18 ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಡಿ ಹೊಗಳಿದರು.
‘ನಿತಿನ್ ಗಡ್ಕರಿ ಅವರು ಹೆದ್ದಾರಿ ಸಚಿವರಾದ ಮೇಲೆ ಹೆದ್ದಾರಿಗಳ ಅಭಿವೃದ್ಧಿ ಪರ್ವ ಶುರುವಾಗಿದೆ. ಪಕ್ಷಾತೀತವಾಗಿ ಅವರು ಕೆಲಸ ಮಾಡುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆಬೇರೆ ಸರ್ಕಾರಗಳು ಇವೆ ಎಂದು ನನಗೆ ಅನ್ನಿಸಿಯೇ ಇಲ್ಲ. ಕೇಂದ್ರದಲ್ಲಿರುವುದು ಕೂಡ ನಮ್ಮದೇ ಸರ್ಕಾರ ಎಂಬಷ್ಟು ಪ್ರೋತ್ಸಾಹ ನಮಗೆ ನೀಡಿದ್ದಾರೆ’ ಎಂದು ಸತೀಶ ಜಾರಕಿಹೊಳಿ ಹೊಗಳಿದರು.
‘ಸಾಮಾನ್ಯವಾಗಿ ಕೇಂದ್ರ– ರಾಜ್ಯದಲ್ಲಿ ಬೇರೆಬೇರೆ ಸರ್ಕಾರಗಳು ಇದ್ದಾಗ ವೈಮನಸ್ಸು ಬಂದೇ ಬರುತ್ತದೆ. ಅದು ಅಭಿವೃದ್ಧಿ ಕಾಮಗಾರಿಗಳ ಮೇಲೂ ಪರಿಣಾಮ ಬೀರುತ್ತದೆ. ಆದರೆ, ನಿತಿನ್ ಗಡ್ಕರಿ ಅವರ ಕಚೇರಿಗೆ ಯಾವಾಗ ಹೋದರೂ ನನಗೆ ಭೇದದ ಅನುಭವ ಆಗಿಲ್ಲ. ಕಳೆದ 12 ವರ್ಷಗಳಿಂದ ರಾಜ್ಯದಲ್ಲಿ ಬಾಕಿ ಇದ್ದ ಕಾಮಗಾರಿಗಳನ್ನು ಅವರೇ ಆಸಕ್ತಿ ವಹಿಸಿ ಮಾಡಿಕೊಟ್ಟಿದ್ದಾರೆ’ ಎಂದರು.
‘ಬೆಳಗಾವಿ ನಗರದಲ್ಲಿ ಮೇಲ್ಸೇತುವೆ ನಿರ್ಮಾಣ, ರಿಂಗ್ ರಸ್ತೆ, ಗೋಕಾಕ ಜಲಪಾತವನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣ ಮಾಡುವ ಭರವಸೆ ನೀಡಿದ್ದಾರೆ. ಅವರಿಂದ ಹೆದ್ದಾರಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿವೆ’ ಎಂದೂ ಹೇಳಿದರು.