ಚಿಕ್ಕೋಡಿ: ಪತಿವ್ರತೆ ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವೂ ವೃದ್ಧಿಯಾಗಲಿ, ಜನುಮ ಜನುಮದಲ್ಲೂ ಈಗಿರುವವ ಪತಿಯೇ ತನಗೆ ದೊರಕಲಿ ಎಂದು ಸುಮಂಗಲಿಯರು ಜೇಷ್ಠ ಮಾಸದ ಹುಣ್ಣಿಮೆಯಂದು ವಟ ಸಾವಿತ್ರಿ ವ್ರತಾಚರಣೆ ಮಾಡಿ ವಟವೃಕ್ಷಕ್ಕೆ ಪೂಜೆ ಸಲ್ಲಿಸುತ್ತಾರೆ. ಆದರೆ, ಇಲ್ಲೊಬ್ಬ ಪತ್ನಿ ಪೀಡಿತ ವ್ಯಕ್ತಿ, ಈಗಿರುವ ಪತ್ನಿ ಮುಂದೆ ಯಾವತ್ತೂ ಪತ್ನಿಯಾಗಿ ಬಾರದಿರಲಿ ಎಂದು ಪ್ರಾರ್ಥಿಸಿ ವಟ ವೃಕ್ಷಕ್ಕೆ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಹೌದು, ಇಲ್ಲಿನ ನವೋದಯ ಸಮಾಜ ಸೇವಾ ಸಂಘದ ಪುರುಷ ಸಾಂತ್ವನ ಕೇಂದ್ರದ ಅಧ್ಯಕ್ಷ ಶಶಿಧರ ರಾಮಚಂದ್ರ ಕೋಪರ್ಡೆ ನಗರದ ವಟ ವೃಕ್ಷಕ್ಕೆ ಮಂಗಳವಾರ ಪೂಜೆ ಸಲ್ಲಿಸಿ, ಪತಿ ಪೀಡಕ ಪತ್ನಿ ಬೇಡ ಎಂದು ಪ್ರಾರ್ಥಿಸಿದ್ದಾರೆ.
‘ನನ್ನನ್ನೂ ಸೇರಿದಂತೆ ನನ್ನ ತಂದೆ-, ತಾಯಿ, ಅಕ್ಕ ತಂಗಿ, ಅಣ್ಣ- ತಮ್ಮಂದಿರ ಮೇಲೆ ಹೆಂಡತಿ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ತೊಂದರೆ ಕೊಟ್ಟಿದ್ದಾಳೆ. ಇಂತಹ ಪತ್ನಿ ಯಾರಿಗೂ, ಯಾವ ಜನ್ಮದಲ್ಲೂ ಸಿಗಬಾರದು. ಅದಕ್ಕಾಗಿ ಪೂಜೆ ಸಲ್ಲಿಸಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಮುಂದಿನ ಜನ್ಮದಲ್ಲಿ ನನ್ನ ಮದುವೆ ಆಗದೇ ಇದ್ದರೂ ಪರವಾಗಿಲ್ಲ. ಸಾಯುವವರೆಗೆ ಅವಿವಾಹಿತನಾಗಿದ್ದರೂ ಸರಿ. ಆದರೆ, ಇಂತಹ ಪತ್ನಿ ಬೇಡವೇ ಬೇಡ’ ಎಂದರು. ಪುರುಷ ಸಾಂತ್ವನ ಕೇಂದ್ರದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.