ಫಲಿತಾಂಶ ವೃದ್ಧಿಸಿಕೊಳ್ಳಲು ಯತ್ನ
ಎಸ್ಎಸ್ಎಲ್ಸಿ ವಾರ್ಷಿಕ–1ನೇ ಪರೀಕ್ಷೆ ಪೂರ್ಣಗೊಳಿಸಿದ್ದರೂ 1608 ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಬೆಳಗಾವಿಯಲ್ಲಿ 1196 ಚಿಕ್ಕೋಡಿಯಲ್ಲಿ 412 ವಿದ್ಯಾರ್ಥಿಗಳಿದ್ದಾರೆ. ‘ಮೊದಲ ಯತ್ನದಲ್ಲಿ ವಿವಿಧ ವಿಷಯಗಳಲ್ಲಿ ತಮ್ಮ ನಿರೀಕ್ಷೆಯಂತೆ ಅಂಕ ಬಾರದ್ದರಿಂದ ಹಲವು ವಿದ್ಯಾರ್ಥಿಗಳು ಫಲಿತಾಂಶ ಸುಧಾರಿಸಿಕೊಳ್ಳಲು ಎರಡನೇ ಯತ್ನಕ್ಕೆ ಮುಂದಾಗಿದ್ದಾರೆ. ಹೆಚ್ಚಿನವರು ಎಲ್ಲ ವಿಷಯಗಳ ಪರೀಕ್ಷೆ ಬರೆಯುತ್ತಿಲ್ಲ. ಆಯ್ದ ವಿಷಯಗಳಿಗಷ್ಟೇ ನೋಂದಣಿ ಮಾಡಿಕೊಂಡಿದ್ದಾರೆ. ಗಣಿತ ವಿಜ್ಞಾನದಂಥ ಕಠಿಣ ವಿಷಯಗಳಿಂದ ದೂರವುಳಿದ ಮಕ್ಕಳು ಸರಳವಾಗಿ ಹೆಚ್ಚಿನ ಅಂಕ ಗಳಿಸಬಲ್ಲ ವಿಷಯಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ‘ಪ್ರಜಾವಾಣಿ’ಗೆ ತಿಳಿಸಿದರು.