ಬೆಳಗಾವಿ: ‘ಭತ್ತದ ಬೆಳೆಯ ನಡುವೆ ಅಜೋಲಾ ಬೆಳೆಯುವುದರಿಂದ ಹಲವು ಲಾಭಗಳಿವೆ’ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಎಚ್.ಡಿ. ಕೋಳೆಕರ ತಿಳಿಸಿದರು.
ತಾಲ್ಲೂಕಿನ ಕಡೋಲಿ, ಬಾದರವಾಡಿ, ಖಾದರವಾಡಿ ಹಾಗೂ ಮಜಗಾಂವ ಗ್ರಾಮಗಳಲ್ಲಿ ‘ಆತ್ಮ’ ಯೋಜನೆಯಡಿ ರೈತರ ಗದ್ದೆಗಳಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಅಜೋಲಾ ಹಸಿರೆಲೆ ಗೊಬ್ಬರವಾಗಿ ಉಪಯೋಗವಾಗುತ್ತದೆ ಹಾಗೂ ಜಾನುವಾರುಗಳಿಗೆ ಒಳ್ಳೆಯ ಪೌಷ್ಟಿಕ ಆಹಾರವಾಗಿ ಉಪಯೋಗಿಸಬಹುದು. ಭತ್ತದ ಬೆಳೆಯಲ್ಲಿ ಅಜೋಲಾ ಬಳಕೆ ಒಂದು ಉತ್ತಮ ಬೇಸಾಯ ಪದ್ಧತಿಯಾಗಿದೆ. ಈ ತಾಂತ್ರಿಕತೆಯನ್ನು ರೈತರಲ್ಲಿ ಜನಪ್ರಿಯಗೊಳಿಸಲಾಗುತ್ತಿದೆ. ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ಪ್ರಾತ್ಯಕ್ಷಿಕೆಯ ಯಶಸ್ಸು ಆಧರಿಸಿ, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಮತ್ತಷ್ಟು ಗ್ರಾಮಗಳಿಗೆ ವಿಸ್ತರಿಸಲಾಗುವುದು’ ಎಂದು ಸಹಾಯಕ ನಿರ್ದೇಶಕ ಆರ್.ಬಿ. ನಾಯ್ಕರ ತಿಳಿಸಿದರು.
ಉಚಗಾಂವ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರುಣ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ಎಸ್.ಟಿ. ಕಾಂಬಳೆ, ಆತ್ಮ ಯೋಜನೆಯ ಉಪಯೋಜನಾ ಅಧಿಕಾರಿ ಮಠದ, ರಾಜಶೇಖರ, ಮಂಜುನಾಥ ಹಕ್ಕಲದವರ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ರೈತರು ಇದ್ದರು.