ಬೆಳಗಾವಿ: ಗದಗ ತೋಂಟದಾರ್ಯ ಮಠದ ಲಿಂ.ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಅವರ ಕುರಿತು ಸರಜೂ ಕಾಟ್ಕರ್ ಬರೆದ ‘ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ’, ಡಾ.ಬಸವರಾಜ ಜಗಜಂಪಿ ರಚಿಸಿದ ‘ಭಾವೈಕ್ಯ ಮೇರು’, ಡಾ.ಸುರೇಶ ಹನಗಂಡಿ ವಿರಚಿತ ‘ಬಯಲ ಬೆಳಕು’ ಕೃತಿಗಳನ್ನು ಇಲ್ಲಿನ ವೈಭವ ನಗರದ ಪ್ರಕಾಶ ಗಿರಿಮಲ್ಲನವರ ಅವರ ನೂತನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.
ಸಾನ್ನಿಧ್ಯ ವಹಿಸಿದ್ದ ಡಂಬಳ–ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಗೃಹಪ್ರವೇಶದ ಸಂದರ್ಭದಲ್ಲಿ ನೆಂಟರು–ಬಂಧುಗಳಿಗೆ ಊಟದ ಆಯೋಜನೆ ಮಾಡುವುದರೊಂದಿಗೆ, ಪುಸ್ತಕ ಬಿಡುಗಡೆಯಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಸಾಹಿತ್ಯದ ಅಭಿರುಚಿ ಬೆಳೆಸಿದಂತಾಗುತ್ತದೆ’ ಎಂದರು.
‘ತೋಂಟದ ಸಿದ್ದಲಿಂಗ ಸ್ವಾಮೀಜಿ ಧಾರ್ಮಿಕ ಕ್ಷೇತ್ರ ಜೊತೆಗೆ ಸಾಹಿತ್ಯ ಸೇರಿದಂತೆ ಹಲವು ರಂಗಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ವ್ಯಕ್ತಿತ್ವ ಬಿಂಬಿಸುವ ಪುಸ್ತಕಗಳನ್ನು ಹೊರತಂದಿರುವುದು ಶ್ಲಾಘನೀಯವಾಗಿದೆ’ ಎಂದು ಹೇಳಿದರು.
ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಚಿಂಚಣಿ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ಕಡೋಲಿಯ ದುರದುಂಡೀಶ್ವರ ಮಠದ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಅನಿಲ ಬೆನಕೆ, ಲೇಖಕರು ಹಾಗೂ ಗದಗದ ಪ್ರೊ.ಚಂದ್ರಶೇಖರ ವಸ್ತ್ರದ, ಗದಗದ ಶಿವನಗೌಡ ಗೌಡರ, ಬಸವರಾಜ ಹಳಿಂಗಳಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.