ಬೆಳಗಾವಿ: ಇಲ್ಲಿನ ಕೆಎಲ್ಇ ಆಸ್ಪತ್ರೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಭಾನುವಾರ ಭೇಟಿ ನೀಡಿ, ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತ್ಕರ್ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ದೇಸೂರಕರ್ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಮೀಪದ ಹಿಂಡಲಗಾ ಕೇಂದ್ರ ಕಾರಾಗೃಹದ ಬಳಿ ಶನಿವಾರ ರಾತ್ರಿ ಇಬ್ಬರ ಮೇಲೆ ಗುಂಡಿನ ದಾಳಿಯಾಗಿದೆ. ಆದರೆ, ರಾಮನ ಕೃಪೆ ಹಾಗೂ ಹಿಂದೂ ಸಂಘಟನೆ ಕೃಪೆಯಿಂದ ಜೀವಕ್ಕೆ ಯಾವುದೇ ರೀತಿಯ ಅಪಾಯವಾಗಿಲ್ಲ. ಈ ಘಟನೆಯನ್ನು ಖಂಡಿಸುತ್ತೇನೆ' ಎಂದರು.
'ಯಾವ ದುಷ್ಕರ್ಮಿಗಳು ಹಾಗೂ ಗೂಂಡಾಗಳು ಈ ಕೃತ್ಯ ಎಸಗಿದ್ದಾರೋ, ಅವರನ್ನು ತಕ್ಷಣವೇ ಬಂಧಿಸಬೇಕು' ಎಂದು ಒತ್ತಾಯಿಸಿದರು.
'ಯಾರಾದರೂ ನಮ್ಮ ಸಂಘಟನೆ ತಡೆಯಲು, ಹಿಂದುತ್ವದ ಕೆಲಸವನ್ನು ನಿಲ್ಲಿಸಲು ಪ್ರಯತ್ನಿಸಿದರೆ, ನಿಮ್ಮ ಆಟ ನಿಮಗೆ ತಿರುಗುಬಾಣವಾಗಲಿದೆ' ಎಂದು ಎಚ್ಚರಿಕೆ ನೀಡಿದರು.
'ಇಂದು ಸಂಜೆ ನಗರದಲ್ಲಿ ಆಯೋಜಿಸಿರುವ ಹಿಂದೂ ವಿರಾಟ್ ಸಮಾವೇಶ ನಿಲ್ಲಿಸಲು ಮತ್ತು ವಿಫಲಗೊಳಿಸಲು ಈ ದಾಳಿ ಮಾಡಿರಬಹುದು. ಆದರೆ, ಸಮಾವೇಶ ವಿಜೃಂಭಣೆಯಿಂದ ನೆರವೇರುತ್ತದೆ. ಯಾವುದೇ ಕಾರಣಕ್ಕೂ ಹೆದರದೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಾನೂ ಭಾಗವಹಿಸುವೆ' ಎಂದರು.
'ರವಿ ಕೋಕಿತ್ಕರ್ ಆರೋಗ್ಯ ಸುಧಾರಿಸಿದ್ದು, ಅವರೂ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಾನು ನಗರ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಘಟನೆ ನಡೆದ ಸ್ಥಳಕ್ಕೂ ಭೇಟಿ ಕೊಡುತ್ತೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.