ಮನುಷ್ಯನು ಇನ್ನೊಬ್ಬರನ್ನು ನೋಡಿ ಅನುಕರಿಸುವುದು ಸಹಜ ಗುಣವಾಗಿದೆ. ನಾವು ಅನುಕರಿಸುವ ಗುಣವು ಒಳ್ಳೆಯದಾಗಿದ್ದರೆ ಪರವಾಗಿಲ್ಲ. ಅದು ದುರ್ಗುಣವಾಗಿದ್ದರೆ, ತೊಂದರೆಗಳು ಎದುರಾಗುವುದು ಬಹಳ. ವ್ರತ ನೇಮಾದಿಗಳಲ್ಲಿಯು ಕೂಡ ಬೇರೆಯವರನ್ನು ಅನುಕರಿಸುತ್ತೇವೆ. ಅದರಿಂದ ಪ್ರಯೋಜನ ಎಷ್ಟರ ಮಟ್ಟಿಗೆ ಆಗುತ್ತದೆ ಎನ್ನುವುದಕ್ಕಿಂತ ನಮ್ಮ ಅನುಕರಣೆಯೆ ದೊಡ್ಡ ವಿಷಯವಾಗುತ್ತದೆ. ನಾವು ಆಚರಿಸುವ ವ್ರತವು ಅನುಕರಣೆ ಆಗದೆ ಆನಂದಿಸುವ ಅನುಭಾವವಾಗಬೇಕು. ವ್ರತಾಚರಣೆಗಳು ಮಾನಸಿಕವಾಗದೆ, ಮುಕ್ತವಾಗಿ ಆಚರಿಸುವ ಪ್ರಕ್ರಿಯೆಗಳಾಗಬೇಕು. ಗುರುಗಳ ಮಾರ್ಗದರ್ಶನವಿಲ್ಲದೆ ಯಾವ ಕಾರ್ಯವನ್ನೂ ಮಾಡಬಾರದು ಎನ್ನುವುದು ಈ ವಚನದ ಉದ್ದೇಶವಾಗಿದೆ. ಹಾಗೇನಾದರೂ ಮಾಡಿದರೆ ಅದು ಭಗವಂತನಿಗೆ ಸಲ್ಲುವುದಿಲ್ಲ ಎಂದು ಬಸವಣ್ಣನವರು ಇಲ್ಲಿ ತಿಳಿಸಿದ್ದಾರೆ. ನಾವು ಒಳ್ಳೆಯದನ್ನಷ್ಟೆ ಅನುಕರಿಸಿದರೆ ಎಲ್ಲರಿಗೂ ಒಳಿತಾಗುತ್ತದೆ.