ಸಮುದ್ರದೊಳಗಿರುವ ಕಪ್ಪೆಚಿಪ್ಪು ಸ್ವಾತಿಮುತ್ತಿನ ಹನಿಗಾಗಿ ಸದಾಕಾಲ ಬಾಯಿ ತೆಗೆಯುವಂತೆ, ನಾನು ಕೂಡ ನಿನ್ನ ಅನುಗ್ರಹಕ್ಕಾಗಿ ಕಾದು ಕುಳಿತಿದ್ದೇನೆ. ನೀನಲ್ಲದೆ ನನಗೆ ಮತ್ತೆ ಯಾರೂ ಗತಿ ಇಲ್ಲ. ನಿನ್ನ ಅನುಗ್ರಹವೆ ನನಗೆ ಆಶೀರ್ವಾದ ಎಂದು ಬಸವಣ್ಣನವರು ಇಲ್ಲಿ ಭಗವಂತನ ಅನುಗ್ರಹದ ಮಹತ್ವವನ್ನು ತಿಳಿಸಿದ್ದಾರೆ. ಸಮುದ್ರದೊಳಗಿರುವ ಸಿಂಪು ಸ್ವಾತಿಮುತ್ತಿನ ಹನಿಯು ಬಿದ್ದ ತಕ್ಷಣ, ತನ್ನಲ್ಲಿ ಮುತ್ತನ್ನು ಸೃಸ್ಟಿಸುವಂತೆ, ಸಾಮಾನ್ಯನಾದ ಭಕ್ತನು ಭಗವಂತನ ಅನುಗ್ರಹಕ್ಕಾಗಿ ಹಾತೊರೆಯುತ್ತಿರುತ್ತಾನೆ. ಭಗವಂತನ ಕೃಪಾದೃಷ್ಟಿಯು ಇವನ ಮೇಲೆ ಬಿದ್ದ ತಕ್ಷಣ ಈತನು ಮಹಾದೇವ ಸ್ವರೂಪಿಯಾಗುತ್ತಾನೆ. ಅದಕ್ಕಾಗಿಯೇ ಈ ವಚನದಲ್ಲಿ ನೀವಲ್ಲದೊಳಕೊಂಬವರಿಲ್ಲ ಎಂದಿದ್ದಾರೆ. ಅಂದರೆ ನೀನಲ್ಲದೆ ನನಗೆ ಬೇರೆ ವಿಧಿ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿದ್ದಾರೆ. ನಿಜಭಕ್ತಿಯಿಂದ ಪೂಜಿಸಿದರೆ ದೇವರು ಒಲಿಯುತ್ತಾನೆ ಎನ್ನುವುದು ಇದರ ಸಾರ.