ರಾಮದುರ್ಗ: ಸಂತ ಪರಂಪರೆಯ ತುಕಾರಾಮ ಮಹಾರಾಜ ಮತ್ತು ಏಕನಾಥ ಮಹಾರಾಜರ ಷಷ್ಠಿ ಮಹೋತ್ಸವ ಹಾಗೂ ವಿಠ್ಠಲ ರುಕ್ಮಿಣಿ ದೇವರ ಜಾತ್ರಾ ಮಹೋತ್ಸವ ನಾರಾಯಣ ಪೇಟೆಯ ಪಾಂಡುರಂಗ ದೇವಸ್ಥಾನದಲ್ಲಿ ಜರುಗಿ, ರಥೋತ್ಸವವು ಏ.2 ರಂದು ಜರುಗಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಂತ ಮಹಾತ್ಮರ ಪುಣ್ಯತಿಥಿ ಅಂಗವಾಗಿ ಹರಿಮಂದಿರದಲ್ಲಿ ಸಪ್ತಾಹ ಆಚರಣೆ ಅಂಗವಾಗಿ ಪುಷ್ಪವೃಷ್ಠಿ, ಹರಿನಾಮ ಸ್ಮರಣೆ, ಪ್ರವಚನ, ಕೀರ್ತನೆಗಳು ಮತ್ತು ಭಜನೆಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಪ್ರತಿ ದಿನವೂ ಕೀರ್ತನೆ, ನಾಮಸ್ಮರಣೆ, ಪ್ರವಚನ ಮುಂತಾದ ಕಾರ್ಯಕ್ರಮ ನಡೆಯಲಿವೆ. ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಶ್ರೇಷ್ಠ ಕೀರ್ತನಕಾರರು ಮತ್ತು ಸಂತ ಮಹಾತ್ಮರು ಪ್ರತಿ ವರ್ಷ ಇಲ್ಲಿಗೆ ಆಗಮಿಸಿ ನೆರೆದ ಭಕ್ತ ಸಮೂಹಕ್ಕೆ ತಮ್ಮ ಜ್ಞಾನ ಭಂಡಾರವನ್ನು ಧಾರೆ ಎರೆಯುವರು.
ಸಪ್ತಾಹದ ಕೊನೆಯ ದಿನವಾದ ಏ. 2ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗುವುದು. ನಿತ್ಯವೂ ಪ್ರಸಾದ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.