<p><strong>ಬೆಳಗಾವಿ:</strong> ಇಲ್ಲಿನ ಟಿಳಕವಾಡಿಯ ಸೋಮವಾರ ಪೇಟೆಯ ‘ಸ್ನೇಹವಾಸ್ತು’ ಅಪಾರ್ಟ್ಮೆಂಟ್ ಪ್ರತಿವರ್ಷ ಬೇಸಿಗೆ ಆರಂಭದಲ್ಲೇ ಜಲಬವಣೆಯಿಂದ ತತ್ತರಿಸುತ್ತಿತ್ತು. ಹಲವು ದಶಕಗಳ ಹಿಂದೆ ಕೊರೆಯಿಸಿದ ಬಾವಿಯು ಸೂರ್ಯನ ಆರ್ಭಟ ಹೆಚ್ಚುತ್ತಲೇ ಬತ್ತುತ್ತಿತ್ತು. ಆದರೆ, ಈ ವರ್ಷ ಏಪ್ರಿಲ್ ಮೊದಲ ವಾರ ಬಂದರೂ ಬಾವಿಯಲ್ಲಿ ಸಂಗ್ರಹವಿರುವ ನೀರು, 20ಕ್ಕೂ ಅಧಿಕ ಕುಟುಂಬದವರ ಅಗತ್ಯತೆ ಪೂರೈಸುತ್ತಿದೆ. ಇದಕ್ಕೆ ಕಾರಣ ಮಳೆ ನೀರು ಸಂಗ್ರಹ ಘಟಕ.</p>.<p>ಹೌದು. ದುಬೈನಲ್ಲಿ 20 ವರ್ಷ ದುಡಿದು ಈಗ ಬೆಳಗಾವಿಗೆ ಬಂದು ಖಾಸಗಿ ಮ್ಯುಚುವಲ್ ಫಂಡ್ನಲ್ಲಿ ಸಹಾಯಕ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಹರೀಶ ಸದಾನಂದ ತೇರಗಾಂವಕರ ತಾವು ವಾಸಿಸುತ್ತಿರುವ ಈ ಅಪಾರ್ಟ್ಮೆಂಟ್ನಲ್ಲಿ ಕಳೆದ ವರ್ಷ ಮಳೆ ನೀರು ಸಂಗ್ರಹ ಘಟಕ ಅಳವಡಿಸಿದರು.</p>.<p>ಪ್ರತಿ ಮಳೆಗಾಲದಲ್ಲಿ ಟೇರೆಸ್ ಮೇಲೆ ಬಿದ್ದು ವ್ಯರ್ಥವಾಗಿ ಹರಿದುಹೋಗುತ್ತಿದ್ದ ಸುಮಾರು 3 ಲಕ್ಷ ಲೀಟರ್ ನೀರನ್ನು ಒಂದೆಡೆ ಸೇರಿಸಿ, ನೈಸರ್ಗಿಕ ಫಿಲ್ಟರ್ ಮೂಲಕ ಬಾವಿ ಸೇರುವಂತೆ ಮಾಡಿದರು. ಇದರಿಂದಾಗಿ ಬಿರು ಬೇಸಿಗೆಯಲ್ಲೂ ಬಾವಿಯಲ್ಲಿ ಜೀವಜಲ ತುಂಬಿಕೊಂಡಿದೆ.</p>.<p>ಅಷ್ಟಕ್ಕೆ ಸುಮ್ಮನಾಗದ ಹರೀಶ, ತಮ್ಮ ಬಡಾವಣೆ ಜನರು ಮತ್ತು ಸ್ನೇಹಿತರಿಗೆ ಮಳೆ ನೀರು ಸಂಗ್ರಹದ ಮಹತ್ವ ಸಾರುತ್ತಿದ್ದಾರೆ. ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಹಾಗಾಗಿ ಈ ಬಡಾವಣೆ ಮತ್ತು ವಡಗಾವಿಯ ಸರಾಫ್ ಕಾಲೊನಿಯ ಎಂಟು ಕುಟುಂಬದವರು ತಮ್ಮ ಮನೆ ಮತ್ತು ಅಪಾರ್ಟ್ಮೆಂಟ್ಗಳಲ್ಲಿ ಮಳೆನೀರು ಸಂಗ್ರಹ ಘಟಕ ಅಳವಡಿಸಿಕೊಂಡು ಯಶ ಕಂಡಿದ್ದಾರೆ. </p>.<p>ಈಗಲೂ ಬಾವಿ ನೀರೇ ಆಸರೆ: ‘ಬಾವಿ ಬತ್ತಿದ್ದರಿಂದ 2024ರಲ್ಲಿ ಫೆಬ್ರುವರಿ 15ರಂದು ಮೊದಲ ಟ್ಯಾಂಕರ್ ತರಿಸಿದ್ದೆವು. ಎಲ್ ಆ್ಯಂಡ್ ಟಿ ಕಂಪನಿಯವರು ಕುಡಿಯಲು ನೀರು ಪೂರೈಸಿದರೆ, ಬಳಕೆಗಾಗಿ ಮಳೆಗಾಲದ ಆರಂಭದವರೆಗೂ ಖಾಸಗಿಯವರಿಂದ ಪ್ರತಿದಿನ ಎರಡು ಟ್ಯಾಂಕರ್ ನೀರು ತರಿಸುತ್ತಿದ್ದೆವು. ಇದಕ್ಕೆ ₹1,400 ವೆಚ್ಚವಾಗುತ್ತಿತ್ತು. ಆದರೆ, ಒಂದೇ ಬಾರಿ ₹10 ಸಾವಿರ ವ್ಯಯಿಸಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿದ್ದರಿಂದ ಈವರೆಗೂ ಟ್ಯಾಂಕರ್ ಮೊರೆ ಹೋಗುವುದು ತಪ್ಪಿದೆ’ ಎಂದು ಹರೀಶ ತೇರಗಾಂವಕರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಭವಿಷ್ಯದಲ್ಲಿ ಭೂಮಿ ಅಥವಾ ಹಣಕ್ಕಿಂತ, ನೀರಿಗಾಗಿಯೇ ಯುದ್ಧ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಹನಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದೇನೆ. ಯಾರೇ ಇಂಥ ಘಟಕ ಅಳವಡಿಕೆಗೆ ಮುಂದೆಬಂದರೆ, ಉಚಿತವಾಗಿಯೇ ಸಲಹೆ, ಮಾರ್ಗದರ್ಶನ ನೀಡುತ್ತಿದ್ದೇನೆ’ ಎಂದರು.</p>.<p>‘ಮಳೆ ನೀರು ಸಂಗ್ರಹದ ಬಗ್ಗೆ ಜನರಿಗೆ ಸರಿಯಾಗಿ ತಿಳಿವಳಿಕೆ ಇಲ್ಲ. ಒಂದುವೇಳೆ ಪ್ರತಿಯೊಬ್ಬರೂ ಮಳೆ ನೀರು ಸಂಗ್ರಹಿಸಿದರೆ, ಬೇಸಿಗೆಯಲ್ಲಿ ಪರದಾಡುವುದು ಸ್ವಲ್ಪವಾದರೂ ತಪ್ಪುತ್ತದೆ. ಇದರಲ್ಲಿ ನಾನೂ ಸಫಲವಾಗಿದ್ದೇನೆ’ ಎನ್ನುತ್ತಾರೆ ಟಿಳಕವಾಡಿಯಲ್ಲಿ ಜಲ ಸಂರಕ್ಷಣೆ ಜಾಗೃತಿಯಲ್ಲಿ ತೊಡಗಿರುವ ಸತೀಶ ಕುಲಕರ್ಣಿ.</p>.<p>‘ಪ್ರತಿವರ್ಷ ಜನವರಿಯಲ್ಲಿ ನಮ್ಮ ಮನೆಯಲ್ಲಿನ ಬಾವಿ ಬತ್ತುತ್ತಿತ್ತು. ಹರೀಶ ಮಾರ್ಗದರ್ಶನದಲ್ಲಿ ಬಾವಿ ಸ್ವಚ್ಛಗೊಳಿಸಿ, ಕಳೆದ ವರ್ಷ ಮಳೆ ನೀರು ಸಂಗ್ರಹಕ್ಕೆ ಮುಂದಾದೆವು. ಹಾಗಾಗಿ ಈಗಲೂ ಬಾವಿಯಲ್ಲಿ ನೀರು ಲಭ್ಯವಿದೆ’ ಎಂದರು ವಿಜಯ ಕಾಮತ.</p>.<div><blockquote>ಮಳೆ ನೀರು ಸಂಗ್ರಹ ವಿಷಯವಾಗಿ ಸಾಮಾಜಿಕ ಆಂದೋಲನ ನಡೆಸಲು ಮುಂದಾಗಿದ್ದೇವೆ. ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ ಮನೆ–ಮನೆಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಲಿದ್ದೇವೆ</blockquote><span class="attribution"> ಹರೀಶ ತೇರಗಾಂವಕರ ಸ್ಥಳೀಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಲ್ಲಿನ ಟಿಳಕವಾಡಿಯ ಸೋಮವಾರ ಪೇಟೆಯ ‘ಸ್ನೇಹವಾಸ್ತು’ ಅಪಾರ್ಟ್ಮೆಂಟ್ ಪ್ರತಿವರ್ಷ ಬೇಸಿಗೆ ಆರಂಭದಲ್ಲೇ ಜಲಬವಣೆಯಿಂದ ತತ್ತರಿಸುತ್ತಿತ್ತು. ಹಲವು ದಶಕಗಳ ಹಿಂದೆ ಕೊರೆಯಿಸಿದ ಬಾವಿಯು ಸೂರ್ಯನ ಆರ್ಭಟ ಹೆಚ್ಚುತ್ತಲೇ ಬತ್ತುತ್ತಿತ್ತು. ಆದರೆ, ಈ ವರ್ಷ ಏಪ್ರಿಲ್ ಮೊದಲ ವಾರ ಬಂದರೂ ಬಾವಿಯಲ್ಲಿ ಸಂಗ್ರಹವಿರುವ ನೀರು, 20ಕ್ಕೂ ಅಧಿಕ ಕುಟುಂಬದವರ ಅಗತ್ಯತೆ ಪೂರೈಸುತ್ತಿದೆ. ಇದಕ್ಕೆ ಕಾರಣ ಮಳೆ ನೀರು ಸಂಗ್ರಹ ಘಟಕ.</p>.<p>ಹೌದು. ದುಬೈನಲ್ಲಿ 20 ವರ್ಷ ದುಡಿದು ಈಗ ಬೆಳಗಾವಿಗೆ ಬಂದು ಖಾಸಗಿ ಮ್ಯುಚುವಲ್ ಫಂಡ್ನಲ್ಲಿ ಸಹಾಯಕ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಹರೀಶ ಸದಾನಂದ ತೇರಗಾಂವಕರ ತಾವು ವಾಸಿಸುತ್ತಿರುವ ಈ ಅಪಾರ್ಟ್ಮೆಂಟ್ನಲ್ಲಿ ಕಳೆದ ವರ್ಷ ಮಳೆ ನೀರು ಸಂಗ್ರಹ ಘಟಕ ಅಳವಡಿಸಿದರು.</p>.<p>ಪ್ರತಿ ಮಳೆಗಾಲದಲ್ಲಿ ಟೇರೆಸ್ ಮೇಲೆ ಬಿದ್ದು ವ್ಯರ್ಥವಾಗಿ ಹರಿದುಹೋಗುತ್ತಿದ್ದ ಸುಮಾರು 3 ಲಕ್ಷ ಲೀಟರ್ ನೀರನ್ನು ಒಂದೆಡೆ ಸೇರಿಸಿ, ನೈಸರ್ಗಿಕ ಫಿಲ್ಟರ್ ಮೂಲಕ ಬಾವಿ ಸೇರುವಂತೆ ಮಾಡಿದರು. ಇದರಿಂದಾಗಿ ಬಿರು ಬೇಸಿಗೆಯಲ್ಲೂ ಬಾವಿಯಲ್ಲಿ ಜೀವಜಲ ತುಂಬಿಕೊಂಡಿದೆ.</p>.<p>ಅಷ್ಟಕ್ಕೆ ಸುಮ್ಮನಾಗದ ಹರೀಶ, ತಮ್ಮ ಬಡಾವಣೆ ಜನರು ಮತ್ತು ಸ್ನೇಹಿತರಿಗೆ ಮಳೆ ನೀರು ಸಂಗ್ರಹದ ಮಹತ್ವ ಸಾರುತ್ತಿದ್ದಾರೆ. ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಹಾಗಾಗಿ ಈ ಬಡಾವಣೆ ಮತ್ತು ವಡಗಾವಿಯ ಸರಾಫ್ ಕಾಲೊನಿಯ ಎಂಟು ಕುಟುಂಬದವರು ತಮ್ಮ ಮನೆ ಮತ್ತು ಅಪಾರ್ಟ್ಮೆಂಟ್ಗಳಲ್ಲಿ ಮಳೆನೀರು ಸಂಗ್ರಹ ಘಟಕ ಅಳವಡಿಸಿಕೊಂಡು ಯಶ ಕಂಡಿದ್ದಾರೆ. </p>.<p>ಈಗಲೂ ಬಾವಿ ನೀರೇ ಆಸರೆ: ‘ಬಾವಿ ಬತ್ತಿದ್ದರಿಂದ 2024ರಲ್ಲಿ ಫೆಬ್ರುವರಿ 15ರಂದು ಮೊದಲ ಟ್ಯಾಂಕರ್ ತರಿಸಿದ್ದೆವು. ಎಲ್ ಆ್ಯಂಡ್ ಟಿ ಕಂಪನಿಯವರು ಕುಡಿಯಲು ನೀರು ಪೂರೈಸಿದರೆ, ಬಳಕೆಗಾಗಿ ಮಳೆಗಾಲದ ಆರಂಭದವರೆಗೂ ಖಾಸಗಿಯವರಿಂದ ಪ್ರತಿದಿನ ಎರಡು ಟ್ಯಾಂಕರ್ ನೀರು ತರಿಸುತ್ತಿದ್ದೆವು. ಇದಕ್ಕೆ ₹1,400 ವೆಚ್ಚವಾಗುತ್ತಿತ್ತು. ಆದರೆ, ಒಂದೇ ಬಾರಿ ₹10 ಸಾವಿರ ವ್ಯಯಿಸಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿದ್ದರಿಂದ ಈವರೆಗೂ ಟ್ಯಾಂಕರ್ ಮೊರೆ ಹೋಗುವುದು ತಪ್ಪಿದೆ’ ಎಂದು ಹರೀಶ ತೇರಗಾಂವಕರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಭವಿಷ್ಯದಲ್ಲಿ ಭೂಮಿ ಅಥವಾ ಹಣಕ್ಕಿಂತ, ನೀರಿಗಾಗಿಯೇ ಯುದ್ಧ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಹನಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದೇನೆ. ಯಾರೇ ಇಂಥ ಘಟಕ ಅಳವಡಿಕೆಗೆ ಮುಂದೆಬಂದರೆ, ಉಚಿತವಾಗಿಯೇ ಸಲಹೆ, ಮಾರ್ಗದರ್ಶನ ನೀಡುತ್ತಿದ್ದೇನೆ’ ಎಂದರು.</p>.<p>‘ಮಳೆ ನೀರು ಸಂಗ್ರಹದ ಬಗ್ಗೆ ಜನರಿಗೆ ಸರಿಯಾಗಿ ತಿಳಿವಳಿಕೆ ಇಲ್ಲ. ಒಂದುವೇಳೆ ಪ್ರತಿಯೊಬ್ಬರೂ ಮಳೆ ನೀರು ಸಂಗ್ರಹಿಸಿದರೆ, ಬೇಸಿಗೆಯಲ್ಲಿ ಪರದಾಡುವುದು ಸ್ವಲ್ಪವಾದರೂ ತಪ್ಪುತ್ತದೆ. ಇದರಲ್ಲಿ ನಾನೂ ಸಫಲವಾಗಿದ್ದೇನೆ’ ಎನ್ನುತ್ತಾರೆ ಟಿಳಕವಾಡಿಯಲ್ಲಿ ಜಲ ಸಂರಕ್ಷಣೆ ಜಾಗೃತಿಯಲ್ಲಿ ತೊಡಗಿರುವ ಸತೀಶ ಕುಲಕರ್ಣಿ.</p>.<p>‘ಪ್ರತಿವರ್ಷ ಜನವರಿಯಲ್ಲಿ ನಮ್ಮ ಮನೆಯಲ್ಲಿನ ಬಾವಿ ಬತ್ತುತ್ತಿತ್ತು. ಹರೀಶ ಮಾರ್ಗದರ್ಶನದಲ್ಲಿ ಬಾವಿ ಸ್ವಚ್ಛಗೊಳಿಸಿ, ಕಳೆದ ವರ್ಷ ಮಳೆ ನೀರು ಸಂಗ್ರಹಕ್ಕೆ ಮುಂದಾದೆವು. ಹಾಗಾಗಿ ಈಗಲೂ ಬಾವಿಯಲ್ಲಿ ನೀರು ಲಭ್ಯವಿದೆ’ ಎಂದರು ವಿಜಯ ಕಾಮತ.</p>.<div><blockquote>ಮಳೆ ನೀರು ಸಂಗ್ರಹ ವಿಷಯವಾಗಿ ಸಾಮಾಜಿಕ ಆಂದೋಲನ ನಡೆಸಲು ಮುಂದಾಗಿದ್ದೇವೆ. ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ ಮನೆ–ಮನೆಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಲಿದ್ದೇವೆ</blockquote><span class="attribution"> ಹರೀಶ ತೇರಗಾಂವಕರ ಸ್ಥಳೀಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>