ಬೆಳಗಾವಿ: ಇಲ್ಲಿನ ಗೋವಾವೇಸ್ ಸಮೀಪದ ರಸ್ತೆ ಬದಿಯಲ್ಲಿ ಕಾಮಗಾರಿಯೊಂದಕ್ಕಾಗಿ ಮಂಗಳವಾರ ಬೆಳಿಗ್ಗೆ ನೆಲ ಅಗೆಯುವಾಗ ಪೈಪ್ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಪೋಲಾಯಿತು.
ಸುಮಾರು ಮುಕ್ಕಾಲು ತಾಸು ನೀರು ದೊಡ್ಡ ಮಟ್ಟದ ಕಾರಂಜಿಯ ರೀತಿ ಚಿಮ್ಮುತ್ತಿತ್ತು. ಇದರಿಂದ ರಸ್ತೆ ತುಂಬೆಲ್ಲಾ ನೀರು ಸಂಗ್ರಹವಾಗಿತ್ತು. ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಯಿತು. ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೂ ನೀರು ಬಿದ್ದಿತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.
ಸ್ಥಳೀಯರು ಮಾಹಿತಿ ನೀಡಿದ ಬಳಿಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯವರು ಆ ಪೈಪ್ಲೈನ್ ಮಾರ್ಗದಲ್ಲಿ ನೀರು ಪೂರೈಕೆ ಬಂದ್ ಮಾಡಿದರು. ಇದರಿಂದಾಗಿ, ಆ ಪ್ರದೇಶದಲ್ಲಿ ನೀರು ಸರಬರಾಜು ಇರಲಿಲ್ಲ.
‘ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಾಗಿ ಗುಂಡಿ ತೋಡುವಾಗ ಬೆಳಿಗ್ಗೆ 8ರ ಸುಮಾರಿಗೆ ಈ ಘಟನೆ ನಡೆದಿದೆ. 8.45ರ ವೇಳೆಗೆ ನೀರು ಬಂದ್ ಮಾಡಲಾಯಿತು. ಸಂಜೆವರೆಗೂ ದುರಸ್ತಿ ಕಾರ್ಯ ಮುಂದುವರಿಯಿತು’ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದರು.