ಬೆಳಗಾವಿ: ‘ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕು. ಪ್ರತಿ ನಾಗರಿಕರೂ ತಿಳಿವಳಿಕೆ ಹೊಂದಿರಬೇಕು’ ಎಂದು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಡಾ.ಎಸ್.ಆರ್. ಯಾದವ ಹೇಳಿದರು.
ಇಲ್ಲಿನ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಭಾವುರಾವ ಕಾಕತಕರ ಕಾಲೇಜಿನ ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ವನ್ಯಜೀವಿ ಸಂರಕ್ಷಣೆ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ವನ್ಯಜೀವಿಗಳ ಬೆಳವಣಿಗೆಗೆ ಕಾಡಿನಲ್ಲಿ ಹುಲ್ಲುಗಾವಲು ಇರಬೇಕು. ಹುಲಿಗೂ ಹುಲ್ಲಿಗೂ ಸಂಬಂಧವಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲ ರಾಜಾಭಾವು ಪಾಟೀಲ, ‘ಅರಣ್ಯ ಸಂಪತ್ತು ವೃದ್ಧಿಯಾದರೆ ಕಾಡು ಪ್ರಾಣಿಗಳು ಬದುಕಲು ಪೂರಕ ವಾತಾವರಣ ಇರುತ್ತದೆ’ ಎಂದು ಹೇಳಿದರು.
ಡಾ.ನೀತಾ ಜಾಧವ, ಡಾ.ಎಸ್.ಎನ್. ಪಾಟೀಲ, ಪ್ರೊ.ಎಸ್.ವೈ. ಪ್ರಭು, ಆಡಳಿತ ಮಂಡಳಿ ಸದಸ್ಯ ದೀಪಕ ದೇಸಾಯಿ ಇದ್ದರು.
ಪ್ರಿಯಾಂಕಾ ಗುರವ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಎಸ್.ಎನ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಡಾ.ನೀತಾ ಜಾಧವ ಪರಿಚಯಿಸಿದರು. ರಸಿಕಾ ಇಂಗಳೆ ಮತ್ತು ಶ್ರದ್ಧಾ ಮೋರೆ ನಿರೂಪಿಸಿದರು. ಸಮಯ ಶಹಾಪುರವಾಲೆ ವಂದಿಸಿದರು.