ಅಥಣಿ: ‘ಜನರಿಗಾಗಿ ದೇವರ ಅಥವಾ ಪರಮಾತ್ಮನ ಸಂವಿಧಾನವಿದೆ. ಅದರ ಅಡಿಯಲ್ಲಿಯೇ ಪ್ರತಿಯೊಬ್ಬರೂ ಬದುಕಬೇಕು. ಅದನ್ನು ಮೀರಲು ಯಾರಿಗೂ ಸಾಧ್ಯವಿಲ್ಲ’ ಎಂದು ಪ್ರವಚನಕಾರ ಇಬ್ರಾಹಿಂ ಸುತಾರ ಹೇಳಿದರು.
ಸಮಿಪದ ದರೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಅವಲಿಂಗಮ್ಮ ದೇವಿ ಜಾತ್ರೆ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ಪ್ರತಿ ಕಾರ್ಯವೂ ನೀತಿ–ನಿಯಮಗಳಿಂದ ಕೂಡಿರಬೇಕು. ಕಾಯಕ, ದಾಸೋಹ, ದಾನ, ಧರ್ಮಗಳು ಸೇರಿದಂತೆ ಸತ್ಕಾರ್ಯಗಳಿಂದ ನಾವು ಪರಮಾತ್ಮನ ಕೃಪೆಗೆ ಪಾತ್ರವಾಗಲು ಸಾಧ್ಯವಿದೆ’ ಎಂದರು.
‘ಶರಣರು ಮತ್ತು ದಾರ್ಶನಿಕರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು. ಯಾರೂ ಸುಲಭವಾಗಿ ಸಾಧನೆ ಮಾಡಿದವರಲ್ಲ. ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಎಂತಹ ಕಷ್ಟ ಬಂದರೂ ಅವರು ಉಪವಾಸ, ವನವಾಸ ಅನುಭವಿಸಿದ್ದಾರೆ. ಆದರೆ ನೀತಿ– ಧರ್ಮ ಬಿಟ್ಟಿಲ್ಲ. ಆದ್ದರಿಂದಲೇ ಅವರು ಮಹಾತ್ಮರ ಸಾಲಿನಲ್ಲಿ ಕಂಗೊಳಿಸುತ್ತಿದ್ದಾರೆ’ ಎಂದು ತಿಳಿಸಿದರು.