ತೆಲಸಂಗ: ‘ಕೋವಿಡ್–19 ಕಾಣಿಸಿಕೊಂಡಾಗಿನಿಂದ ವೃತ್ತಿ ರಂಗಭೂಮಿ ಕಲಾವಿದರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅವರು ವೃತ್ತಿ ತೊರೆಯದಂತೆ ನೋಡಿಕೊಳ್ಳುವ ಕೆಲಸ ನಡೆಯದಿದ್ದಲ್ಲಿ ರಂಗಭೂಮಿ ಬಡವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಕಲಾವಿದ ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ರವಿ ಕೊರೆ ಹೇಳಿದರು.
ಸಮೀಪದ ಕೊಕೊಟನೂರ ಗ್ರಾಮದ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ಮನರಂಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೋವಿಡ್ನಿಂದಾಗಿ ನಾಟಕ ಕಂಪನಿಗಳು ಬಂದ್ ಆಗಿವೆ. ಕಲಾವಿದರು ಜೀವನ ನಿರ್ವಹಣೆಗಾಗಿ ಬೇರೆ ಉದ್ಯೋಗವನ್ನು ಅರಸಿ ಹೋಗುತ್ತಿದ್ದಾರೆ. ಹೀಗೆ ಹೋದವರು ರಂಗಭೂಮಿಗೆ ಮರಳದಿದ್ದರೆ ನಾಡಿನ ಸಂಸ್ಕೃತಿಯ ಹಾಗೂ ಸಂಸ್ಕಾರದ ಶಕ್ತಿಯಾದ ರಂಗಭೂಮಿ ಮತ್ತಷ್ಟು ಬಡವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಹಾಸ್ಯ ಕಲಾವಿದ ಚಿದಾನಂದ ಕಾಂಬಳೆ, ‘ಜೀವನದುದ್ದಕ್ಕೂ ತಮ್ಮನ್ನು ಕಲಾ ಸೇವೆಗೆ ಮುಡಿಪಾಗಿಟ್ಟವರು ಇಂದು ಬೀದಿಗೆ ಬರುವಂತಾಗಿದೆ. ಸರ್ಕಾರ ಅವರ ಕೈಹಿಡಿಯಬೇಕು’ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಐ.ಸಿ. ನೇಮಗೌಡ, ಮಾಜಿ ಸೈನಿಕ ಮುನ್ನಾ ಕರಜಗಿ, ಗಾಯಕ ರಾಜು ಹೊನಕಾಂಬಳೆ, ಕಾರ್ಯದರ್ಶಿ ರಮೇಶ ಐಗಳಿ, ಆಲಗೌಡ ಸವದಿ, ಸುರೇಶ ನೇಮಗೌಡ, ಗಂಗಪ್ಪ ರಡೆರಹಟ್ಟಿ ಇದ್ದರು.