ಬೆಳಗಾವಿ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ನಮ್ಮಲ್ಲಿ ಕನ್ನಡದ ಅಸ್ಮಿತೆ ಸದಾ ಇರಬೇಕು’ ಎಂದು ಕೆಆರ್ಸಿಇಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಕೆ. ಗಾಂವ್ಕರ್ ಹೇಳಿದರು.
ಇಲ್ಲಿನ ಎಸ್ಜಿವಿ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಕನ್ನಡ ಭಾವ-ವೈಭವ’ ಕಾರ್ಯಕ್ರಮ (ವರ್ಚುಯೆಲ್)ದಲ್ಲಿ ಅವರು ಮಾತನಾಡಿದರು.
‘ಕನ್ನಡದ ನೆಲದಲ್ಲಿ ಜನಿಸಿದ ನಾವು ಬೇರೆ ಬೇರೆ ಭಾಷೆಗಳನ್ನು ಗೌರವಿಸಬೇಕು. ಆದರೆ, ಕನ್ನಡ ನಮ್ಮ ಉಸಿರಾಗಿರಬೇಕು. ಕನ್ನಡ ಭಾಷೆಗೆ ನಶಿಸುವ ಆತಂಕವಿಲ್ಲ. ಆದರೆ, ಹೆಚ್ಚೆಚ್ಚು ಬಳಸುವಂತಾಗಬೇಕು. ಕನ್ನಡ ಮಾತನಾಡಲು ಹಿಂಜರಿಯುವ ಮನೋಭಾವ ಸರಿಯಲ್ಲ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ವಿ. ಭಟ್ಟ, ‘ಕನ್ನಡ ಕುಟುಂಬದ ಭಾಷೆ. ಅದು ನಮ್ಮ ಹಕ್ಕು. ಅದನ್ನು ಸದಾ ಬಳಸಿಕೊಳ್ಳಬೇಕು; ರಕ್ಷಿಸಿಕೊಳ್ಳಬೇಕು’ ಎಂದು ಆಶಿಸಿದರು.
ಮುಕುಂದ ಗೋಖಲೆ, ಅಭಿಜಿತ ಹಣಗೋಡಿಮಠ ಹಾಗೂ ವಿದ್ಯಾರ್ಥಿಗಳು ಮಾತನಾಡಿದರು.
ಪಾಲ್ಗೊಂಡಿದ್ದವರಿಗೆ ಕನ್ನಡ ಶಾಲು ಹಾಗೂ ಕನ್ನಡ ಪುಸ್ತಕ ನೀಡಲಾಯಿತು.
ವಿದ್ಯಾರ್ಥಿನಿ ಸುರಭಿ ಖೋತ್ ಪ್ರಾರ್ಥಿಸಿದರು. ಉಪ ಪ್ರಾಚಾರ್ಯ ಆನಂದ ಖೋತ್ ಸ್ವಾಗತಿಸಿದರು. ನರಸಿಂಹ ಭಟ್ಟ ಪರಿಚಯಿಸಿದರು. ಉಪನ್ಯಾಸಕ ರಾಜು ಭಟ್ಟ ನಿರೂಪಿಸಿದರು. ಉಪನ್ಯಾಸಕ ಮಹೇಶ ಢವಳೇಶ್ವರ ವಂದಿಸಿದರು.