ಬೆಳಗಾವಿ: ‘ಅಧ್ಯಕ್ಷನಾಗಿ ಆಯ್ಕೆಯಾದರೆ ನನ್ನ ಅಧಿಕಾರದ ಅವಧಿಯ ಐದು ವರ್ಷಗಳಲ್ಲಿ ಎರಡು ಅಖಿಲಭಾರತಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ ಸ್ಥಾನ ಮಹಿಳಾ ಸಾಹಿತಿಗೆ ದೊರೆಯುವಂತೆ ಮಾಡುತ್ತೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ ಸ್ಥಾನದ ಸ್ಪರ್ಧಿ ವ.ಚ. ಚನ್ನೇಗೌಡ ಭರವಸೆ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನು ಬಳಿಗಾರ ಅವಧಿಯಲ್ಲಿ ನಾಲ್ಕು ವರ್ಷ ಎಂಟು ತಿಂಗಳು ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷನಾಗಿ ರಾಜ್ಯದಾದ್ಯಂತ ಸಂಚರಿಸಿದ್ದೇನೆ. ಕನ್ನಡ ಸೇವೆ ಮಾಡುವ ಉದ್ದೇಶದಿಂದ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ’ ಎಂದು ಹೇಳಿದರು.
‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಮನವೊಲಿಸಿ ಕಸಾಪದಲ್ಲಿ 2007ರಲ್ಲೇ ₹ 1.5 ಕೋಟಿ ಮೊತ್ತದ ದತ್ತಿ ಸ್ಥಾಪಿಸಿ ಪ್ರತಿ ವರ್ಷ ನಾಡಿನ ಹಿರಿಯ ಸಾಹಿತಿಯೊಬ್ಬರಿಗೆ ₹ 7 ಲಕ್ಷ ಮೊತ್ತದ ಪ್ರಶಸ್ತಿ ನೀಡುವಂತೆ ಮಾಡಿದ್ದೇನೆ. 45 ವರ್ಷದೊಳಗಿನ ಐವರು ಯುವ ಬರಹಗಾರರಿಗೆ ತಲಾ ₹ 25 ಸಾವಿರ ನಗದು ಪುರಸ್ಕಾರದೊಂದಿಗೆ ‘ಮಯೂರ ವರ್ಮ’ ಪ್ರಶಸ್ತಿ ನೀಡಲಾಗುತ್ತಿದೆ’ ಎಂದರು.
‘ಅಧ್ಯಕ್ಷನಾಗಿ ಆಯ್ಕೆಯಾದರೆ ಕಸಾಪದಲ್ಲಿ ಶಾಶ್ವತ ನಿಘಂಟು ವಿಭಾಗ ಸ್ಥಾಪಿಸುತ್ತೇನೆ. ಮಹತ್ವದ ಕನ್ನಡ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದಿಸಿ ಮುದ್ರಿಸಲು ಕ್ರಮ ವಹಿಸುವೆ. ಕಸಾಪ ಸದಸ್ಯತ್ವ ಪಡೆಯುವುದು, ಪುಸ್ತಕ ಖರೀದಿ ಸೇರಿದಂತೆ ಪರಿಷತ್ತಿನ ಎಲ್ಲ ಚಟುವಟಿಕೆಗಳು ಆನ್ಲೈನ್ ಮೂಲಕ ನಡೆಯುವಂತೆ ಮಾಡುತ್ತೇನೆ. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆ ಸಬಲೀಕರಣ ಸಮಿತಿಯ ವರದಿ ಅನುಷ್ಠಾನ ಆಗುವಂತೆ ನೋಡಿಕೊಳ್ಳುವುದು, ಯುವ ಬರಹಗಾರರು ಹಾಗೂ ಮಹಿಳಾ ಸಾಹಿತಿಗಳಿಗೆ ಪರಿಷತ್ತಿನ ವೇದಿಕೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಯೋಜನೆ ಇದೆ’ ಎಂದು ಹೇಳಿದರು.
‘ಅಶಕ್ತ ಸಾಹಿತಿಗಳು, ಕಲಾವಿದರಿಗೆ ಆರೋಗ್ಯ ವಿಮೆ ಜಾರಿ, ಎಲ್ಲ ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಅನುಷ್ಠಾನ ಮತ್ತು ಅದಕ್ಕೆ ಆಂಧ್ರದ ಮಾದರಿ ಕಾನೂನು ಬಲ ತಂದುಕೊಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು. ನಾಲ್ಕು ಕಂದಾಯ ವಲಯಗಳಲ್ಲಿ ಮಹಿಳಾ, ದಲಿತ, ವಚನ ಹಾಗೂ ದಾಸ ಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳ ಸಮಾವೇಶ ನಡೆಸುವ ಉದ್ದೇಶ ಹೊಂದಿದ್ದೇನೆ. ಸದಸ್ಯರು ಬೆಂಬಲ ನೀಡಬೇಕು’ ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.