ಹುಕ್ಕೇರಿ: ಹೋದ ವರ್ಷ ತಾಲ್ಲೂಕಿನಲ್ಲಿ ಬಿದ್ದ ಭಾರಿ ಮಳೆಯಿಂದ ಕಮತನೂರ ಮತ್ತು ಗುಟಗುದ್ದಿ ಕೆರೆಗಳು ಒಡೆದ ನಿಮಿತ್ತ ಹಾನಿಯಾದ ಆಸ್ತಿ ಪಾಸ್ತಿಗೆ ಸಿಗಬೇಕಾದ ಪರಿಹಾರ ಧನವನ್ನು ಬೇಗನೆ ಕೊಡಿಸಬೇಕೆಂದು ಸಂತ್ರಸ್ತ ರೈತರು ಸಂಸದ ರಮೇಶ್ ಕತ್ತಿ ಅವರಿಗೆ ಮನವಿ ಸಲ್ಲಿಸಿದರು.
ಕೆರೆ ಒಡೆದ ನಿಮಿತ್ತ ಹೊಲಗಳಲ್ಲಿ ಇದ್ದ ಬೆಳೆ ಜೊತೆ ಬದುಗಳು ಕೊಚ್ಚಿಕೊಂಡು ಹೋಗಿದ್ದು ಅಲ್ಲದೆ ಇದ್ದ ಬಿದ್ದ ಬಾವಿಗಳು ಮುಚ್ಚಿವೆ. ದರಿಂದ ತಮ್ಮ ಬದುಕು ಕಷ್ಟಕರವಾಗಿದೆ ಎಂದು ಇಸ್ಲಾಂಪೂರ, ಗುಟಗುದ್ದಿ ಗ್ರಾಮಗಳಿಂದ ಬಂದಿದ್ದ ರೈತರು ಅಳಿಲು ತೋಡಿಕೊಂಡರು.
ತಹಸೀಲದಾರ ಎ.ಐ. ಅಕ್ಕಿವಾಟೆ ಅವರನ್ನು ಪ್ರಶ್ನಿಸಿದಾಗ, ತಮ್ಮ ಇಲಾಖೆಯಿಂದ ಕೊಡಬಹುದಾದ ಬೆಳೆ ಹಾನಿ ವಿತರಿಸಿರಬೇಕಾಗಿದೆ. ಮಿಕ್ಕ ಪರಿಹಾರ ಧನ ಸಣ್ಣ ನೀರಾವರಿ ಇಲಾಖೆಯಿಂದ ಬರಬೇಕಿದೆ ಎಂದರು.
ಎರಡು ಕೆರೆಗಳಿಂದ ಆದ ಹಾನಿಯ ಬಗ್ಗೆ ಸಂಪೂರ್ಣವಾಗಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿರುವದಾಗಿ ತಿಳಿಸಿದ ಅವರು ತಾ.ಪಂ, ಕೃಷಿ ಅಧಿಕಾರಿ ಮತ್ತು ಸಣ್ಣ ನೀರಾವರಿ ಅಧಿಕಾರಿಗಳ ಜೊತೆ ಸಭೆ ನಡೆಯಿಸಿ ಪ್ರಸ್ತಾವನೆಯ ಪೂರ್ತಿ ಮಾಹಿತಿ ಕೊಡುವದಾಗಿ ಹೇಳಿದರು.
ಕಮತನೂರ ಕೆರೆಯಿಂದ ಸಂತ್ರಸ್ತರಾದ (ಕಪ್ಪರ ಹಳ್ಳದ ಬದಿ ಇರುವ) ಕಮತನೂರ, ಗವನಾಳ, ಗೋಟೂರ ಮತ್ತು ಹೆಬ್ಬಾಳ ರೈತರಿಗೆ ಮತ್ತು ಗುಟಗುದ್ದಿ ಕೆರೆಯಿಂದ ಸಂತ್ರಸ್ತರಾದ ಗಜಪತಿ, ಶಹಾಬಂದರ ಮತ್ತು ಇಸ್ಲಾಂಪೂರ ರೈತರಿಗೆ ಬೇಗೆ ಪರಿಹಾರ ಸಿಗುವಂತೆ ಕ್ರಮ ಜರುಗಿಸಲು ತಾವು ಕೃಷಿ ಸಚಿವ ಉಮೇಶ್ ಕತ್ತಿ ಅವರಿಗೆ ಒತ್ತಾಯಿಸುವದಾಗಿ ರೈತರಿಗೆ ಹೇಳಿದರು.
ಮನವಿ: ತಾವು ಬೆಳೆದ ಕಬ್ಬನ್ನು ಬೇಗನೆ ಕಾರ್ಖಾನೆಗೆ ಸಾಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದ ರೈತರು ಸಂಸದರಲ್ಲಿ ಮನವಿ ಮಾಡಿದರು. ಉಪಸ್ಥಿತರಿದ್ದ ವ್ಯವಸ್ಥಾಪಕ ನಿರ್ದೇಶಕ ಅಶೋಕ ಪಾಟೀಲ ಅವರಿಗೆ ಸೂಚನೆ ನೀಡಿ, ರೈತರಿಗೆ ಅನುಕೂಲ ಮಾಡಿ ಕೊಡಲು ಹೇಳಿದರು.
ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಾ ಶುಗರ್ಸ್ ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಶ್ರೆಶೈಲಪ್ಪ ಮಗದುಮ್ಮ, ಭೀಮಣ್ಣ ರಾಮಗೋನಟ್ಟಿ ಮತ್ತಿತರು ಉಪಸ್ಥಿತರಿದ್ದರು.