ಹೊಸಪೇಟೆ: ಶುಭ ಧನಲಕ್ಷ್ಮಿ ಸಹಕಾರಿಯ ಹಣ ದುರುಪಯೋಗ ಪಡಿಸಿಕೊಂಡಿದ್ದ ಅದರ ಮಾಜಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ ಶೆಟ್ಟಿ ಅವರ ಸ್ಥಿರ ಮತ್ತು ಚರ ಆಸ್ತಿಯನ್ನು ಶುಕ್ರವಾರ ನಗರದಲ್ಲಿ ವಶಕ್ಕೆ ಪಡೆಯಲಾಯಿತು.
2014ರಲ್ಲಿ ಸಹಕಾರಿ ಸಿ.ಇ.ಒ. ಆಗಿದ್ದ ಶಿವಪ್ರಕಾಶ ಶೆಟ್ಟಿ ಅವರು ₹7,70,810 ದುರುಪಯೋಗ ಪಡಿಸಿಕೊಂಡಿದ್ದರು. ಈ ಕುರಿತು ಸಹಕಾರಿಯಿಂದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘಗಳ ಉಪನಿಬಂಧಕರ ದಾವಾ ಪಂಚಾಯಿತಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಬಡ್ಡಿ ಸಮೇತ ₹16,50,360 ಅವರಿಂದ ಪಡೆಯಬೇಕು. ಒಂದುವೇಳೆ ಹಣ ಭರಿಸಲು ಆಗದಿದ್ದರೆ ಅವರ ಚರ ಮತ್ತು ಸ್ಥಿರಾಸ್ತಿ ವಶಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿತ್ತು.
ಅದರ ಪ್ರಕಾರ ಶುಭ ಧನಲಕ್ಷ್ಮಿ ಸೌಹಾರ್ದ ವಿವಿದೋದ್ದೇಶ ಸಹಕಾರಿ ಮಾರಾಟ ಅಧಿಕಾರಿ ಜಿ. ಓಬಳಾಪತಿ, ಹಾಲಿ ಸಿ.ಇ.ಒ. ಮಲ್ಲಿಕಾರ್ಜುನಗೌಡ, ನಿರ್ದೇಶಕ ಗೋವರ್ಧನ ಶೆಟ್ಟಿ, ವಕೀಲ ಜನಾದ್ರಿ ವೆಂಕೋಬಯ್ಯ ಶೆಟ್ಟಿ ಸಮ್ಮುಖದಲ್ಲಿ ಅವರ ಆಸ್ತಿ ಲೆಕ್ಕ ಹಾಕಿ ವಶಕ್ಕೆ ಪಡೆದರು.