ಕೊಟ್ಟೂರು: ‘ಕೊವೀಡ್ ನಮ್ಮೆಲ್ಲರ ಜೀವನದಲ್ಲಿ ಮರೆಯಲಾಗದ ಪಾಠ ಕಲಿಸಿದೆ. ಇತರೆ ರೋಗಿಗಳಂತೆ ಕೋವಿಡ್ ರೋಗಿಗಳಿಗೂ ಖುಷಿಯಿಂದಲೇ ಅರೈಕೆ ಮಾಡಿದ್ದೇನೆ. ಈ ಸದವಕಾಶ ಹೆಚ್ಚು ಜನರಿಗೆ ಸಿಗುವುದಿಲ್ಲ’
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೊವೀಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುಳಾ ಅವರು ಮಾತು.
‘ಮೊದಲ ಬಾರಿ ಕೋವಿಡ್ ರೋಗಿಗಳು ಆಸ್ಪತ್ರೆಗೆ ಬಂದಾಗ ಆತಂಕದ ಜತೆ ಭಯ ಕೂಡ ಇತ್ತು. ದಿನ ಕಳೆದಂತೆ ಮಾಮೂಲು ಅನಿಸಿತು. ಖುಷಿಯಿಂದಲೇ ಕೆಲಸ ಮಾಡುತ್ತಿರುವೆ. ಕೊಟ್ಟೂರೇಶ್ವರನ ದಯೆಯಿಂದ ಇಲ್ಲಿಯೇ ಹುಟ್ಟಿರುವ ನನಗೆ ನನ್ನೂರು ಜನರ ಸೇವೆ ಮಾಡುವ ಸೌಭಾಗ್ಯ ದೊರೆತಿದೆ’ ಎಂದು ಮಂಜುಳಾ ಹೇಳಿದರು.
‘ಇಲ್ಲಿಗೆ ಬರುವ ಸೋಂಕಿತರಲ್ಲಿ ಸಹಜವಾಗಿಯೇ ಭಯ ಇರುತ್ತದೆ. ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವುದರ ಜತೆಗೆ ಮೊಬೈಲ್ನಲ್ಲಿ ಅವರ ಮನೆಯವರಿಗೂ ಸ್ಥೈರ್ಯ ತುಂಬುವ ಕೆಲಸ ಮಾಡಿರುವೆ. ಕೋವಿಡ್ನಿಂದ ಅವರು ಗುಣಮುಖರಾಗಿ ಹೋಗುವಾಗ ಅವರು ಹೇಳುವ ಕೃತಜ್ಞತೆಯ ಮಾತುಗಳು ಎಲ್ಲ ರೀತಿಯ ಒತ್ತಡ ಮರೆಸುತ್ತದೆ’ ಎಂದರು.