ಹೊಸಪೇಟೆ (ವಿಜಯನಗರ): ಕೋವಿಡ್ ನಿಷೇಧಾಜ್ಞೆ ಉಲ್ಲಂಘಿಸಿ ಸೋಮವಾರ ರಸ್ತೆಗಿಳಿದಿದ್ದ 96 ವಾಹನಗಳನ್ನು ಪೊಲೀಸರು ನಗರದಲ್ಲಿ ವಶಕ್ಕೆ ತೆಗೆದುಕೊಂಡರು.
ನಗರದ ಟಿ.ಬಿ. ಡ್ಯಾಂ ಠಾಣೆ ವ್ಯಾಪ್ತಿಯಲ್ಲಿ 60 ದ್ವಿಚಕ್ರ, 4 ಕಾರು, ಚಿತ್ತವಾಡ್ಗಿ ಠಾಣೆಯಲ್ಲಿ 4 ದ್ವಿಚಕ್ರ ವಶ, ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ 16 ದ್ವಿಚಕ್ರ, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 11 ದ್ವಿಚಕ್ರ, 1 ಆಟೊ ವಶಕ್ಕೆ ತೆಗೆದುಕೊಳ್ಳಲಾಗಿದೆ.
‘ಸೋಮವಾರದಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಯಾರೂ ಕೂಡ ವಾಹನಗಳಲ್ಲಿ ರಸ್ತೆಗೆ ಇಳಿಯುವಂತಿಲ್ಲ. ಆದರೆ, ಅನೇಕರು ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದರು. ಅವರನ್ನು ತಡೆದು, ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 15 ದಿನಗಳ ನಿಷೇಧಾಜ್ಞೆ ತೆರವಾದ ನಂತರ ಮಾಲೀಕರಿಗೆ ವಾಹನಗಳನ್ನು ನೀಡಲಾಗುವುದು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಸಂಯಮದ ವರ್ತನೆ:
ಸಾರ್ವಜನಿಕರ ಅನಗತ್ಯ ಓಡಾಟ ತಪ್ಪಿಸಲು ಖಾಕಿ ಪಡೆ ಸೋಮವಾರ ಬೆಳಿಗ್ಗೆ 5.30ಕ್ಕೆ ರಸ್ತೆಗೆ ಇಳಿದಿತ್ತು. ಆರು ಗಂಟೆಯಾದ ನಂತರ ವಾಹನಗಳಲ್ಲಿ ರಸ್ತೆಗಿಳಿದವರನ್ನು ವಿಚಾರಿಸಿ, ಎಚ್ಚರಿಕೆ ಕೊಟ್ಟು ಕಳುಹಿಸಿದರು.
ಟಿ.ಬಿ. ಡ್ಯಾಂ ರಸ್ತೆ, ಎಪಿಎಂಸಿ ಪ್ರದೇಶದಲ್ಲಿ ಕೆಲವು ಯುವಕರು ಸಕಾರಣವಿಲ್ಲದೆ ಹೊರಗೆ ಓಡಾಡುತ್ತಿದ್ದರು. ಅವರನ್ನು ತಡೆದು, ಅವರ ವಾಹನಗಳನ್ನು ವಶಕ್ಕೆ ಪಡೆದರು. ಇನ್ನು ನಗರದ ಮಾರ್ಕಂಡೇಶ್ವರ ದೇವಸ್ಥಾನ, ರಾಮ ಟಾಕೀಸ್ ಬಳಿ ಗುಂಪು ಸೇರಿದ ಜನರನ್ನು ಚದುರಿಸಿದರು. ಕೆಲವರಿಗೆ ಬೆತ್ತದ ರುಚಿ ತೋರಿಸಿ ಕಳುಹಿಸಿದರು. ಆದರೆ, ಪೊಲೀಸರು ಎಲ್ಲಿಯೂ ಸಂಯಮ ಕಳೆದುಕೊಳ್ಳದೆ ಸಾರ್ವಜನಿಕರೊಂದಿಗೆ ಮೃದುವಾಗಿ ವರ್ತಿಸಿದರು.
ಪ್ರತಿಯೊಬ್ಬರನ್ನು ತಡೆದು, ವಿಚಾರಿಸಿ, ಆಸ್ಪತ್ರೆ, ಬ್ಯಾಂಕು ಸೇರಿದಂತೆ ಇತರೆ ತುರ್ತು ಸೇವೆಗಳಿಗೆ ಹೋಗುವವರಿಗೆ ತೆರಳಲು ಅವಕಾಶ ಕಲ್ಪಿಸಿದರು. ಸೂಕ್ತ ಕಾರಣವಿಲ್ಲದೆ ಓಡಾಡುತ್ತಿದ್ದವರು, ವಾಹನಗಳ ದಾಖಲೆಯಿಲ್ಲದೆ ಸಂಚರಿಸುತ್ತಿದ್ದವರು, ತಮ್ಮೊಂದಿಗೆ ವಾಗ್ವಾದಕ್ಕಿಳಿದವರ ವಾಹನ ವಶಕ್ಕೆ ಪಡೆದರು.