ಹೊಸಪೇಟೆ: ತಾಲ್ಲೂಕಿನ ಕಮಲಾಪುರದ ಪುರಾತನ ಕೋಟೆ ನಾಶಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ವೇದಿಕೆಯ ಪದಾಧಿಕಾರಿಗಳು ಮಂಗಳವಾರ ಈ ಸಂಬಂಧ ತುಂಗಭದ್ರಾ ಮಂಡಳಿಯ ಉಪ ವಿಭಾಗ ಅಧಿಕಾರಿ ದೇವೇಂದ್ರಪ್ಪ, ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ನಾಯ್ಕ ಅವರಿಗೆ ನೀಡಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಕೋಟೆಯನ್ನು ಜೆ.ಸಿ.ಬಿ. ಬಳಸಿ ರಾಜಾರೋಷವಾಗಿ ನಾಶಗೊಳಿಸಲಾಗಿದೆ. ಹಾಡಹಗಲೇ ಇಷ್ಟೆಲ್ಲ ನಡೆದರೂ ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ. ಅದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕೋಟೆಯಿದ್ದ ಸ್ಥಳದಲ್ಲಿಯೇ ಪುನರ್ ನಿರ್ಮಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ವೇದಿಕೆಯ ವಿಭಾಗ ಕಾರ್ಯದರ್ಶಿ ಮೌನೇಶ್ ಬಡಿಗೇರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಗ್ರಾಮೀಣ ಕಾರ್ಯದರ್ಶಿ ಗಣೇಶ್ ನೀರ್ಲಿಗಿ, ತಾಲ್ಲೂಕು ಅಧ್ಯಕ್ಷ ಸಿದ್ದೇಶ್ ಪೂಜಾರ, ಹೋರಾಟ ಪ್ರಮುಖ ಓಬಯ್ಯ ಜೋಗದ ಮನವಿಗೆ ಸಹಿ ಹಾಕಿದ್ದಾರೆ.