ಹೊಸಪೇಟೆ: ನಗರದ ಅಶ್ವತ್ಥ ನಾರಾಯಣ ಕಟ್ಟೆಯಿಂದ ಉಕ್ಕಡಕೇರಿ ಗರಡಿ ಮನೆ ವರೆಗೆ ಸಂಪೂರ್ಣ ಹಾಳಾಗಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿ.ವೈ.ಎಫ್.ಐ.) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಮುಖ ಮಾರ್ಗಗಳಲ್ಲಿ ರ್ಯಾಲಿ ನಡೆಸಿದ ಕಾರ್ಯಕರ್ತರು ನಂತರ ನಗರಸಭೆ ಕಚೇರಿಗೆ ತೆರಳಿ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
’ರಸ್ತೆ ಹಾಳಾಗಿರುವ ಕಾರಣ ಇಡೀ ಪ್ರದೇಶದಲ್ಲಿ ಸದಾ ದೂಳು ಆವರಿಸಿಕೊಂಡಿರುತ್ತದೆ. ಇದರಿಂದಾಗಿ ಜನ ಅಸ್ತಮಾ, ಕಣ್ಣು ಉರಿ, ಚರ್ಮ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಕ್ಕಳು, ಹಿರಿಯ ನಾಗರಿಕರು ಓಡಾಡಲು ಸಮಸ್ಯೆಯಾಗುತ್ತಿದೆ. ಗುಂಡಿ ಬಿದ್ದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ವಿಷಯ ಅನೇಕ ಸಲ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ‘ ಎಂದು ಮನವಿಯಲ್ಲಿ ಸಿಟ್ಟು ಹೊರಹಾಕಿದ್ದಾರೆ.
’ಕುಡಿಯುವ ನೀರು ಯೋಜನೆ, ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಕಾಮಗಾರಿ ಮುಗಿದ ನಂತರ ರಸ್ತೆ ದುರಸ್ತಿಗೊಳಿಸದೆ ನಿರ್ಲಕ್ಷ್ಯ ತೋರಲಾಗಿದೆ. ತೆರಿಗೆ ಪಾವತಿಸುವ ಜನರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು ನಗರಸಭೆ ಕರ್ತವ್ಯ. ಏಳು ಕೇರಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಕೆಲವೇ ದಿನಗಳಲ್ಲಿ ದಸರಾ ಹಬ್ಬ ಬರಲಿದ್ದು, ಕೇರಿ ದೇವರುಗಳ ಮೆರವಣಿಗೆ ನಡೆಯುತ್ತದೆ. ಅಷ್ಟರೊಳಗೆ ರಸ್ತೆ ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಅ. 2ರ ಗಾಂಧಿ ಜಯಂತಿಯ ದಿನ ಉಪವಾಸ ಸತ್ಯಾಗ್ರಹ ನಡೆಸಲಾಗುವುದು‘ ಎಂದು ಎಚ್ಚರಿಕೆ ನೀಡಿದ್ದಾರೆ.
ಫೆಡರೇಶನ್ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್, ತಾಲ್ಲೂಕು ಅಧ್ಯಕ್ಷ ಕಿನ್ನಾಳ್ ಹನುಮಂತ, ಕಾರ್ಯದರ್ಶಿ ಕಲ್ಯಾಣಯ್ಯ, ಉಪಾಧ್ಯಕ್ಷ ಬಂಡೆ ತಿರುಕಪ್ಪ, ಕೆ.ಎ. ಪವನ್ ಕುಮಾರ್, ಖಜಾಂಚಿ ಈ. ಮಂಜುನಾಥ, , ಸಹ ಕಾರ್ಯದರ್ಶಿ ಹನುಮಾ ನಾಯ್ಕ, ಸೂರ್ಯಕಿರಣ್, ರಾಜಚಂದ್ರಶೇಖರ್ ಇದ್ದರು.