ಹೊಸಪೇಟೆ: ಕಂಪ್ಲಿ ತಾಲ್ಲೂಕಿನ ದೇವಸಮುದ್ರದ 200 ಎಕರೆ ರೈತರ ಇನಾಂ ಜಮೀನಿನ ಪಟ್ಟ ಮಾಡಿಕೊಡಬೇಕೆಂದು ತುಂಗಭದ್ರಾ ರೈತ ಸಂಘ ಆಗ್ರಹಿಸಿದೆ.
ಈ ಸಂಬಂಧ ಸಂಘದ ಜಿಲ್ಲಾ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಗುರುವಾರ ನಗರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಗ್ರಾಮದ ಒಟ್ಟು 6,000 ಎಕರೆ ಇನಾಂ ಜಮೀನಿನ ಪೈಕಿ 5,800 ಎಕರೆ ಜಮೀನಿನ ಪಟ್ಟಾ ರೈತರಿಗೆ ನೀಡಲಾಗಿದೆ. ಇನ್ನುಳಿದ 200 ಎಕರೆ ಜಮೀನಿನ ಪಟ್ಟಾ ಕೊಟ್ಟಿಲ್ಲ. ರೈತರಿಗೆ ಆದಷ್ಟು ಶೀಘ್ರ ಪಟ್ಟಾ ಕೊಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಗ್ರಾಮೀಣ ಭಾಗದ ರೈತರ ತುಂಡು ಜಮೀನುಗಳ ನೋಂದಣಿಯಾಗದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನಿಗೆ ತಿದ್ದುಪಡಿ ಮಾಡಿ ಅದನ್ನು ಸರಳಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಸಂಘದ ಮುಖಂಡರಾದ ಕುರುಬರ ಲಿಂಗರಾಜ, ದೇವಸಮುದ್ರದ ರೈತರಾದ ಕುರುಬರ ನಾಗೇಂದ್ರಪ್ಪ, ಎಂ. ಮೃತ್ಯುಂಜಯ ಸ್ವಾಮಿ ಇದ್ದರು.