ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಿ, ಕೊಳೆಗೇರಿ ವಾಸಿಗಳಿಗೆ ಹತ್ತು ಸಾವಿರ ಮನೆ ನಿರ್ಮಿಸಿಕೊಡಬೇಕು ಎಂದು ‘ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ’ ಒತ್ತಾಯಿಸಿದೆ.
ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಬುಧವಾರ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸಿದರು.
ಈಗಾಗಲೇ ಸರ್ಕಾರವು ವಿಜಯನಗರ ಜಿಲ್ಲೆ ಘೋಷಿಸಿದೆ. ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಆಕ್ಷೇಪಣೆ ಸ್ವೀಕರಿಸುತ್ತಿದೆ. ಈ ಭಾಗದ ಜನರ ಬಹುವರ್ಷಗಳ ಒತ್ತಾಸೆಯಂತೆ ಜಿಲ್ಲೆ ಘೋಷಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಎನ್ನುವುದು ನಮ್ಮ ಸಂಘಟನೆಯ ಆಗ್ರಹವೂ ಆಗಿದೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ₹2,000 ಕೋಟಿ ಅನುದಾನ ಮೀಸಲಿಡಬೇಕು. ಖನಿಜ ನಿಧಿಯಿಂದ ₹1,000 ಕೋಟಿ ತೆಗೆದಿಡಬೇಕು. ಸ್ಲಂ ನಿವಾಸಿಗಳ ಸಮಗ್ರ ಕಲ್ಯಾಣಕ್ಕೆ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಮುಖಂಡರಾದ ರಾಮಚಂದ್ರ, ಹುಲಿಗೆಮ್ಮ, ನಾಜರಾ, ಫಾತೀಮಾ, ಖೈರುನ್ನೀಸಾ, ರಜೀಯಾ ಬೇಗಂ, ಶ್ರೀನಿವಾಸ, ಹುಸೇನ್ಬೀ, ರೆಹಮಾನ್, ವೆಂಕಟಮ್ಮ, ಶಿವಪ್ಪ, ರೇಖಾ, ವಿಠ್ಠಲ ಇದ್ದರು.