ಹೊಸಪೇಟೆ (ವಿಜಯನಗರ): ರೌಡಿ ಪಟ್ಟಿಯಿಂದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಮುಖಂಡರ ಹೆಸರು ಕೈಬಿಡಬೇಕೆಂದು ಫೆಡರೇಶನ್ ಆಗ್ರಹಿಸಿದೆ.
ಈ ಸಂಬಂಧ ಫೆಡರೇಶನ್ ಮುಖಂಡರು ಸೋಮವಾರ ನಗರದಲ್ಲಿ ಗೃಹಸಚಿವರಿಗೆ ಬರೆದ ಮನವಿ ಪತ್ರವನ್ನು ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.
ಸಂಡೂರು ತಾಲ್ಲೂಕಿನ ತೋರಣಗಲ್ ಸಮೀಪ ಡಾಂಬರ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಫೆಡರೇಶನ್ ಮುಖಂಡರ ನೇತೃತ್ವದಲ್ಲಿ ‘ಡಾಂಬರ್ ಕಾರ್ಖಾನೆ ಸ್ಥಾಪನೆ ವಿರೋಧಿ ಸಮಿತಿ’ ರಚಿಸಿ, ಹೋರಾಟ ನಡೆಸಲಾಗಿತ್ತು. ಆದರೆ, ಜಿಂದಾಲ್ ಒಳಸಂಚು ನಡೆಸಿ, ಗಲಾಟೆ ನಡೆಸಿದ್ದರಿಂದ 32 ಜನ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಎಲ್ಲರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಿ, ಮಾನಸಿಕ, ದೈಹಿಕವಾಗಿ ಕುಗ್ಗಿಸಿದ್ದಾರೆ. ಇದು ಪ್ರತಿಭಟನೆ ಹತ್ತಿಕ್ಕುವ ಕುತಂತ್ರ. ಕೂಡಲೇ ರೌಡಿ ಪಟ್ಟಿಯಿಂದ ಎಲ್ಲರ ಹೆಸರು ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಫೆಡರೇಶನ್ ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್, ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ತಾಲ್ಲೂಕು ಅಧ್ಯಕ್ಷ ಈಡಿಗರ ಮಂಜುನಾಥ, ಮುಖಂಡರಾದ ಕಲ್ಯಾಣಯ್ಯ, ಬಿ. ತಿರುಕಪ್ಪ, ಕೆ. ಹನುಮಂತ, ಅಲ್ತಾಫ್, ಮಾಲತೇಶ್, ಖಾಲಿದ್, ಜೆ. ಶಿವಕುಮಾರ್ ಇದ್ದರು.