ಹಗರಿಬೊಮ್ಮನಹಳ್ಳಿ: ಕೃಷಿಕನ ಮಗಆತ್ಮರಕ್ಷಣೆಗಾಗಿ ಕಲಿತ ಕರಾಟೆ ಸಾಕಷ್ಟು ಹೆಸರು ತಂದುಕೊಟ್ಟಿದೆ.
ಪಟ್ಟಣದ ಪ್ರಸಿದ್ಧಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಎನ್.ದೊಡ್ಡ ಬಸವರಾಜ ಇದೀಗ ಬ್ಲ್ಯಾಕ್ ಬೆಲ್ಟ್ ಸಾಧಕರು.
ಚಿಲಗೋಡು ದೊಡ್ಡಕರಿಯಪ್ಪ ಮತ್ತು ಹನುಮಕ್ಕನವರ ಮಗ ದೊಡ್ಡ ಬಸವರಾಜ ಬಿ.ಪಿ.ಇಡಿ. ಪದವೀಧರರು.ಹೋದ ವರ್ಷ ಚೈನ್ನೈನಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಷಿಪ್ನಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಬಳ್ಳಾರಿಯಲ್ಲಿ ನಡೆದ ರಾಜ್ಯ ಚಾಂಪಿಯನ್ಷಿಪ್ನಲ್ಲಿ ಮೊದಲ ಬಹುಮಾನ ಗಳಿಸಿದ್ದಾರೆ.
ಕಳೆದ ವಾರ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಷಿಪ್ನ ಕುಮತೆ ವಿಭಾಗದ 70 ಕೆ.ಜಿ. ತೂಕದವರ ಸ್ಪರ್ಧೆಯಲ್ಲಿ ಎದುರಾಳಿಯನ್ನು ಕೆಲವೇ ನಿಮಿಷಗಳಲ್ಲಿ ಮಣಿಸಿ ಬಹುಮಾನ ಗಳಿಸಿ, ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕುಟುಂಬದ ಬದುಕಿನ ನಿರ್ವಹಣೆಗಾಗಿ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿತ್ಯ 10 ಕಿ.ಮೀ. ದೂರ ನಡಿಗೆ, ದೈಹಿಕ ಕಸರತ್ತು ಮಾಡಿ, ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಕರಾಟೆಯಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡು ದೈಹಿಕ ಕ್ಷಮತೆ ಕಾಪಾಡಿಕೊಂಡಿದ್ದಾರೆ. ಇದುವರೆಗೂ ಗ್ರಾಮೀಣ ಮತ್ತು ಪಟ್ಟಣದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿದ್ದಾರೆ. ಸ್ವಯಂ ರಕ್ಷಣೆ, ಪಂಚಸ್, ಬ್ಲಾಕ್ಸ್ ಮತ್ತು ಕಿಕ್ಸ್ನಲ್ಲಿ ಪರಿಣತಿ ಪಡೆದಿರುವ ಬಸವರಾಜ್ ಸ್ಕೇಟಿಂಗ್ ಮತ್ತು ಈಜು ತರಬೇತುದಾರರಾಗಿಯೂ ಹೆಸರು ಮಾಡಿದ್ದಾರೆ.
ಗುರು ಮುತ್ಕೂರು ಸುಭಾಷ್ ಅವರಿಂದ ಕರಾಟೆ ತರಬೇತಿ ಪಡೆದ ದೊಡ್ಡ ಬಸವರಾಜರಿಗೆ ಪ್ರಸ್ತುತ ಕರಾಟೆ ಬದುಕಿಗೆ ಆಸರೆಯಾಗಿದೆ.
‘ಮಲೇಷ್ಯಾದಲ್ಲಿ ಹಮ್ಮಿಕೊಂಡಿದ್ದ ಕರಾಟೆ ಚಾಂಪಿಯನ್ಷಿಪ್ನಲ್ಲಿ ದೇಶಕ್ಕೆ ಕೀರ್ತಿ ತಂದಿದ್ದೇನೆ. ಸ್ನೇಹಿತರ ಬಳಿ ₹70 ಸಾವಿರ ಸಾಲ ಮಾಡಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆದರೆ, ಸರ್ಕಾರದಿಂದ ಇದುವರೆಗೆ ಬಿಡಿಗಾಸೂ ನೆರವು ಸಿಕ್ಕಿಲ್ಲ. ಆಟಗಾರರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರದಿಂದ ಆಗಬೇಕು’ ಎಂದು ದೊಡ್ಡ ಬಸವರಾಜ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.