ಹೊಸಪೇಟೆ (ವಿಜಯನಗರ): ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರೂ ಆದ ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್ ಪಿ. ಶ್ರವಣ್ ಅವರು ಶುಕ್ರವಾರ ತಾಲ್ಲೂಕಿನ ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಹಂದಿಗುಡ್ಡದಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಿಸಿದರು.
ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ, ‘ಸಕಾಲಕ್ಕೆ ವೇತನ ಪಾವತಿಸಲಾಗುತ್ತಿದೆಯೇ? ಎಷ್ಟು ದಿನಗಳಿಂದ ಕೆಲಸ ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿ ಮಾಹಿತಿ ಪಡೆದರು.
‘ಕಾಯ್ದಿಟ್ಟ ಅರಣ್ಯ ವ್ಯಾಪ್ತಿಯ ಗುಡ್ಡಗಳ ಮಣ್ಣಿನ ಸವಕಳಿ ತಡೆಯಲು, ಹಸಿರೀಕರಣಗೊಳಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ₹25 ಲಕ್ಷದಲ್ಲಿ ಹಂದಿಗುಡ್ಡ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ತಾಲ್ಲೂಕಿನ ಕಲ್ಲಹಳ್ಳಿ, ರಾಜಪುರದ 300 ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಈ ಭಾಗದ ಅಭಿವೃದ್ಧಿಯೂ ಆಗುತ್ತದೆ’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಎಂ.ಉಮೇಶ್, ವಲಯ ಅರಣ್ಯ ಅಧಿಕಾರಿ ವಿನಯ್ ಕೆ.ಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮಾ ಕಾಳೆ ಇದ್ದರು.
ಇದಕ್ಕೂ ಮುನ್ನ ಅವರು ನಗರದ ಮುನ್ಸಿಪಲ್ ಮೈದಾನಕ್ಕೆ ಭೇಟಿ ನೀಡಿ, ಅದರ ಅಭಿವೃದ್ಧಿ ಕುರಿತು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಿಶೋರ್ ಕುಮಾರ ಅವರಿಂದ ಮಾಹಿತಿ ಪಡೆದರು.