ಹೊಸಪೇಟೆ: ಭಾನುವಾರ ಸುರಿದ ಬಿರುಸಿನ ಮಳೆಯಿಂದ ಕಾದು ಕಾವಲಿಯಂತಾಗಿದ್ದ ಧರೆ ತಂಪಾಗಿದ್ದು, ಸುಡುವ ಬಿಸಿಲಿಗೆ ರೋಸಿ ಹೋಗಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಬೆಳಿಗ್ಗೆಯಿಂದಲೇ ವಿಪರೀತ ಸೆಕೆ ಇತ್ತು. ಮಧ್ಯಾಹ್ನ ಒಂದು ಗಂಟೆಗೆ ಸೂರ್ಯ ಕಣ್ಮರೆಯಾಗಿ ದಟ್ಟ ಕಾರ್ಮೋಡ ಆವರಿಸಿಕೊಂಡಿತ್ತು. ಬಳಿಕ ಆರಂಭವಾದ ಬಿರುಸಿನ ಮಳೆ ಎಡೆಬಿಡದೆ ಮಧ್ಯಾಹ್ನ ಎರಡುವರೆ ತನಕ ಸುರಿಯಿತು.
ಗುಡುಗಿನೊಂದಿಗೆ ಸುರಿದ ಮಳೆಯಿಂದ ಕೆಲ ರಸ್ತೆಗಳಲ್ಲಿ ನೀರು ನಿಂತಿತ್ತು. ಚರಂಡಿಗಳು ಉಕ್ಕಿ ಹರಿದವು. ಲಾಕ್ಡೌನ್ ಸಡಿಲಿಕೆಯಿದ್ದರೂ ಬೆಳಿಗ್ಗೆಯಿಂದಲೇ ಜನರ ಓಡಾಟ ಕಡಿಮೆಯಿತ್ತು. ಮಳೆಯಿಂದಾಗಿ ಅದು ಇನ್ನಷ್ಟು ತಗ್ಗಿತ್ತು.
ಒಂದುವರೆ ಗಂಟೆ ಸತತ ಸುರಿದ ಮಳೆ ಇಡೀ ಬೇಸಿಗೆಯನ್ನೇ ಮರೆಸುವಂತೆ ಮಾಡಿತು. ಎಲ್ಲೆಡೆ ವಾತಾವರಣ ಸಂಪೂರ್ಣ ತಂಪಾಗಿತ್ತು. ತಂಗಾಳಿ ಬೀಸುತ್ತಿತ್ತು.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಸಂಡೂರಿನಲ್ಲೂ ಮಳೆಯಾಗಿರುವುದು ವರದಿಯಾಗಿದೆ.