ಕಮಲಾಪುರ: ಡೊಂಗರಗಾಂವ ಕ್ರಾಸ್ ಬಳಿ ಶುಕ್ರವಾರ ರಾತ್ರಿ ಟ್ರ್ಯಾಕ್ಟರ್ಗೆ ಕಾರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಮತ್ತು ಟ್ರ್ಯಾಕ್ಟರ್ ಚಾಲಕ ಸೇರಿ ಆರು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿದ್ದ ನವನಿಹಾಳ ಗ್ರಾಮದ ಶ್ರೀಕಾಂತ ಅಂಬಾರಾವ ಗುಂಡೂರ (24) ಮತ್ತು ಟ್ರ್ಯಾಕ್ಟರ್ ಚಾಲಕ ಡೋರ್ ಜಂಬಗಾದ ಹುಸೇನಸಾಬ್ ಅಬ್ಬಾಸ ಅಲಿ (50) ಅವರ ಸ್ಥಿತಿ ಚಿಂತಾಜನಕವಾಗಿದೆ.
ಇದೇ ಗ್ರಾಮದ ನಾಗರಾಜ ಬಸವಂತರಾಯ ಬಿರಾದಾರ (28), ಶ್ರೀನಾಥ ಸುಭಾಷ್ ಬಿರಾದಾರ (26), ಡೋರ ಜಂಬಗಾದ ವಿಜಯಕುಮಾರ ಶ್ರೀಮಂತ (27), ಚಂದ್ರಕಾಂತ ದೇವಿಂದ್ರಪ್ಪ (27) ಅವರಿಗೆ ಗಂಭೀರ ಗಾಯಗಳಾಗಿವೆ.
ರೇಣುಕಾಚಾರ್ಯ ಜಯಂತಿ ನಿಮಿತ್ತ ಸ್ನೇಹಿತರೆಲ್ಲ ಸೇರಿ ನವನಿಹಾಳ ಗ್ರಾಮದಿಂದ ತೆಲಂಗಾಣದ ಕೊಲ್ಲಿಪಾಕಿಗೆ ತೆರಳುತ್ತಿದ್ದರು. ಡೊಂಗರವಾಂವ ಕ್ರಾಸ್ ಬಳಿ ಮೇವು ತುಂಬಿಕೊಂಡ ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್ ಹಾಗೂ ಕಾರು ಸಂಪೂರ್ಣ ನಜ್ಜುಗುಜ್ಜಾಗಿವೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಕಲಬುರ್ಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.