ಹಗರಿಬೊಮ್ಮನಹಳ್ಳಿ: ಕುರಿ ಚರ್ಮದಿಂದ ತಯಾರಿಸುವ ಕಂಬಳಿಗೆ ಉಲನ್ ದಾರದಿಂದ ಅಲಂಕಾರಗೊಳಿಸಿ, ಅದಕ್ಕೆ ಹೊಸ ರೂಪ ಕೊಡುವ ಕಲೆ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮಾತಾಗಿದ್ದಾರೆ ತಾಲ್ಲೂಕಿನ ಹಂಪಾಪಟ್ಟಣದ ಕರಿಗಾರ ಗಂಗಮ್ಮ.
ಕೃಷಿ, ಗಂಗಮ್ಮ ಅವರ ಮೂಲ ಕಸುಬು. ಬಿಡುವಿದ್ದಾಗ ಕಂಬಳಿ ಅಲಂಕಾರ ಮಾಡಿ, ಅದರಿಂದ ಬರುವ ಹಣ ಜೀವನ ನಿರ್ವಹಣೆಗೆ ಬಳಸಿಕೊಳ್ಳುತ್ತಾರೆ.
ದಿನಕ್ಕೆ ಮೂರು ಕಂಬಳಿ ಅಲಂಕಾರ ಮಾಡುವ ಗಂಗಮ್ಮನವರು ದಿನಕ್ಕೆ ₹300ರಿಂದ ₹350 ದುಡಿಮೆ ಮಾಡುತ್ತಾರೆ. ಕೆಲವರು ಹಣದ ಬದಲಾಗಿ ಜೋಳ, ಅಕ್ಕಿ ಕೂಡ ಕೊಡುತ್ತಾರೆ. ಯಾರು ಏನೇ ಕೊಟ್ಟರೂ ಅದನ್ನು ವಿನಮ್ರದಿಂದ ತೆಗೆದುಕೊಳ್ಳುತ್ತಾರೆ.
ಕಾಲು ಗೆಜ್ಜೆಗೂ ಅಲಂಕಾರ ಮಾಡುವ ಕಲೆಯೂ ಇವರಿಗೆ ರೂಢಿಗತ. ಕೆಲಸ ಹೆಚ್ಚಾದಾಗ ಬೇರೆಯವರನ್ನು ಕೆಲಸಕ್ಕೆ ಇಟ್ಟುಕೊಂಡು ದಿನಕ್ಕೆ ₹150 ಕೊಡುತ್ತಾರೆ. ಪತಿ ದಿ. ಕರಿಗಾರ ಚಿನ್ನಪ್ಪ ಅವರಿಂದ ಕಲಿತಿರುವ ಕಲೆ, ಅವರು ಗತಿಸಿ ಹೋದ ನಂತರ ಅವರ ನೆರವಿಗೆ ಬಂದಿದೆ.
‘ಕರಿಗಾರ ಗಂಗಮ್ಮ ಅವರ ಕಲೆ ಗುರುತಿಸಿ, ಅದಕ್ಕೆ ಅಗತ್ಯ ನೆರವು ನೀಡುವ ಕೆಲಸ ಆಗಬೇಕು. ಸಾಂಪ್ರದಾಯಿಕ ಕಲೆ ಮುಂದಿನ ಪೀಳಿಗೆಗೂ ಗೊತ್ತಾಗಬೇಕು’ ಎಂದು ಲೇಖಕ ಅಂಬಳಿ ಕೇಶವಮೂರ್ತಿ ಹೇಳಿದರು.