ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾರ್ಚ್ ಅಂತ್ಯಕ್ಕೆ ₹ 50,220 ಕೋಟಿ ವಹಿವಾಟು ನಡೆಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಷಿ ತಿಳಿಸಿದರು.
ನಗರದಲ್ಲಿರುವ ಬ್ಯಾಂಕಿನ ಪ್ರಧಾನ ಶಾಖೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶದ 46 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ಪೈಕಿ ಈ ಸಾಧನೆ ಮಾಡಿದ ಏಕೈಕ ಬ್ಯಾಂಕ್ ಎಂಬ ಕೀರ್ತಿಯೂ ನಮ್ಮದಾಗಿದೆ ಎಂದರು.
ಬ್ಯಾಂಕ್ ₹ 28,435 ಕೋಟಿ ಠೇವಣಿ ಸಂಗ್ರಹ ಮಾಡಿದ್ದು ದೇಶದಲ್ಲಿ 2ನೇ ಸ್ಥಾನ ಪಡೆದಿದೆ. ₹21,785 ಕೋಟಿ ಸಾಲ ನೀಡಿದ್ದು, ಮೊದಲ ಸ್ಥಾನ ಪಡೆದಿದೆ ಎಂದರು.
2019-20ನೇ ಸಾಲಿನಲ್ಲಿ ಬ್ಯಾಂಕ್ 45,795 ರೈತರಿಗೆ ₹ 521 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಸಾಲ ನೀಡಲಾಗಿದೆ. ಆದ್ಯತೆ ವಲಯದಲ್ಲಿ ₹ 19,928 ಸಾಲ ನೀಡಲಾಗಿದೆ ಎಂದರು.
ಕೋವಿಡ್ ಹೋರಾಟಕ್ಕೆ ಬೆಂಬಲ ನೀಡಲು ಬ್ಯಾಂಕ್ ಸಿಬ್ಬಂದಿಯ ಒಂದು ದಿನದ ಸಂಬಳದ ಒಟ್ಟು ಮೊತ್ತ ₹ 85 ಲಕ್ಷವನ್ನು ದೇಣಿಗೆಯಾಗಿ ಪಿಎಂ ಕೇರ್ಸ್ ನಿಧಿಗೆ ನೀಡಲಾಗಿದೆ ಎಂದರು.
ಬಳ್ಳಾರಿ, ಕಲಬುರ್ಗಿ ಮತ್ತು ಚಿತ್ರದುರ್ಗ ಜಿಲ್ಲೆಯ ಲ್ಲಿ ಬ್ಯಾಂಕ್ ಸಂಚಾರಿ ಎಟಿಎಂ ಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಂಕಿನ ವ್ಯವಹಾರ ಪ್ರತಿನಿಧಿಗಳು ಕೋವಿಡ್ ಸಂದರ್ಭದಲ್ಲೂ ಮಾರ್ಚ್ನಿಂದ ಮೇವರೆಗೆ ಒಟ್ಟು 26 ಲಕ್ಷ ಸಂಪರ್ಕಗಳ ಮೂಲಕ ₹ 762 ಕೋಟಿ ಮೊತ್ತದ ವಹಿವಾಟು ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.