ಚಿರತೆ ದಾಳಿ; ಕುರಿಗಾಹಿ ಗಂಭೀರ ಗಾಯ

ಹೊಸಪೇಟೆ: ತಾಲ್ಲೂಕಿನ ಇಂಗಳಗಿಯಲ್ಲಿ ಭಾನುವಾರ ಚಿರತೆ ದಾಳಿ ನಡೆಸಿದ್ದರಿಂದ ಕುರಿಗಾಹಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ಯಾದಗಳ್ಳ ಪಂಪಾಪತಿ (45) ಗಂಭೀರವಾಗಿ ಗಾಯಗೊಂಡವರು. ಅವರ ಮುಖ, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಗ್ರಾಮದ ಹೊರವಲಯದಲ್ಲಿ ಕುರಿಗಳೊಂದಿಗೆ ಐದು ಜನ ಕುರಿಗಾಹಿಗಳು ಮಲಗಿದ್ದರು. ತಡರಾತ್ರಿ ಮೂರು ಗಂಟೆ ಸುಮಾರಿಗೆ ಚಿರತೆ ಪಂಪಾಪತಿ ಮೇಲೆ ದಾಳಿ ನಡೆಸಿದೆ. ಈ ವೇಳೆ ಪಂಪಾಪತಿ ಜೋರಾಗಿ ಕಿರುಚಿದ್ದಾರೆ. ಇತರೆ ಕುರಿಗಾಹಿಗಳು ಅವರ ನೆರವಿಗೆ ಧಾವಿಸಿದಾಗ ಚಿರತೆ ಓಡಿ ಹೋಗಿದೆ. ಪಂಪಾಪತಿ ಅವರಿಗೆ ಗಂಭೀರ ಗಾಯಗಳಾಗಿವೆ. ಅವರು ಕಂಬಳಿ ಹೊದ್ದುಕೊಂಡು ಮಲಗಿದ್ದರಿಂದ ಗಾಯಗಳಷ್ಟೇ ಆಗಿವೆ. ಇಲ್ಲವಾದಲ್ಲಿ ಅವರ ಜೀವ ಹೋಗುತ್ತಿತ್ತು' ಎಂದು ಗ್ರಾಮಸ್ಥ ಇಂಗಳಗಿ ಉದೇದಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಗ್ರಾಮದ ಸುತ್ತ ಚಿರತೆ ಹಾವಳಿ ಹೆಚ್ಚಾಗಿದೆ. ಜನ ಜೀವ ಭಯದಲ್ಲಿ ಓಡಾಡುತ್ತಿದ್ದಾರೆ. ಅವುಗಳ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.