ಹೊಸಪೇಟೆ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಶಾಲಿಯಾದ ಸದಸ್ಯರ ಸನ್ಮಾನ ಸಮಾರಂಭ ಇಲ್ಲಿನ ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸಂಜೆ ನಡೆಯಿತು.
ಅರಣ್ಯ ಸಚಿವ ಆನಂದ್ ಸಿಂಗ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ನೂತನ ಸದಸ್ಯರನ್ನು ಸತ್ಕರಿಸಿದರು. ‘ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರಕ್ಕೆ ₹500 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಏತ ನೀರಾವರಿ ಯೋಜನೆ ಈಗಾಗಲೇ ಪ್ರಗತಿಯಲ್ಲಿದೆ. ವಿಜಯನಗರಕ್ಕೆ ಉಜ್ವಲ ಭವಿಷ್ಯ ಇದ್ದು, ಎಲ್ಲರೂ ಸೇರಿಕೊಂಡು ಮಾದರಿ ಜಿಲ್ಲೆ ಮಾಡೋಣ’ ಎಂದು ಆನಂದ್ ಸಿಂಗ್ ಹೇಳಿದರು.
‘ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಸಚಿವನಾಗಿ ಎಲ್ಲ ರೀತಿಯ ಸಹಕಾರ ಕೊಡುವೆ. ಕೆಲವೇ ತಿಂಗಳಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷ ಬಲಪಡಿಸೋಣ’ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಪ್ರಧಾನ ಕಾರ್ಯದರ್ಶಿಗಳಾದ ಜೀವರತ್ನಂ, ಶಂಕರ್ ಮೇಟಿ, ಮುಖಂಡರಾದ ಗುದ್ಲಿ ಪರಶುರಾಮ, ಅಯ್ಯಾಳಿ ತಿಮ್ಮಪ್ಪ, ಸಾಲಿ ಸಿದ್ದಯ್ಯ ಸ್ವಾಮಿ, ಶಶಿಧರ್ ಸ್ವಾಮಿ ಇದ್ದರು.