ಹೊಸಪೇಟೆ: ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯವರು ಗುರುವಾರ ಇಲ್ಲಿನ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಸ್ಥಳಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಆಪ್ತ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್ ಬಂದು ಮನವಿ ಪತ್ರ ಸ್ವೀಕರಿಸಿದರು.
‘ರಾಜ್ಯದ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಂತ ಕೈಯಿಂದ ಹಣ ಭರಿಸಿ, ಆನ್ಲೈನ್ ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ. 20–25 ವರ್ಷಗಳಿಂದ ‘ಅತಿಥಿ’ಗಳಾಗಿದ್ದುಕೊಂಡೇ ಸೇವೆ ಸಲ್ಲಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರಿಗೆ ಮಾಸಿಕ ₹50,000 ವೇತನ ನಿಗದಿಪಡಿಸಬೇಕೆಂದು ಹೋದ ವರ್ಷ ಯುಜಿಸಿ ಸುತ್ತೋಲೆ ಹೊರಡಿಸಿದೆ. ಹೀಗಿದ್ದರೂ ಅದು ಜಾರಿಗೆ ಬಂದಿಲ್ಲ. ಕೆಲವರಿಗಂತೂ ನಾಲ್ಕೈದು ತಿಂಗಳಿಂದ ವೇತನ ಬಂದಿಲ್ಲ’ ಎಂದು ಮನವಿಯಲ್ಲಿ ಗೋಳು ತೋಡಿಕೊಂಡಿದ್ದಾರೆ.
‘ಲಾಕ್ಡೌನ್ ಬಳಿಕ ಅತಿಥಿ ಉಪನ್ಯಾಸಕರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮನೆ ನಡೆಸುವುದು ಕಷ್ಟವಾಗಿದೆ. ಕೆಲವರಂತೂ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನಷ್ಟು ಜನ ಪ್ರಾಣ ಬಿಡುವುದಕ್ಕೂ ಮೊದಲು ಸರ್ಕಾರ ಎಚ್ಚೆತ್ತುಕೊಂಡು ತಕ್ಷಣವೇ ನೆರವಿಗೆ ಧಾವಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದ್ದಾರೆ.
ಸಮಿತಿಯ ಜಿಲ್ಲಾ ಸಂಚಾಲಕ ಪ್ರಶಾಂತ್ ಬಡಿಗೇರ್, ಸಂಯೋಜಕ ಪಂಪಾಪತಿ, ಸಂಘಟಕರಾದ ಅಭಿಷೇಕ್, ಹುಲುಗಪ್ಪ, ಅರ್ಜುನ, ಪ್ರಾಧ್ಯಾಪಕರಾದ ದೀಪಕ್, ಬಸವರಾಜ್, ಷಣ್ಮುಖಪ್ಪ, ಗೋಣಿಬಸಪ್ಪ, ಅನ್ನಪೂರ್ಣ ಗೋಸ್ವಾಳ್, ಕುಸುಮಾ, ಪದ್ಮಜಾ ಇದ್ದರು.