ಹೊಸಪೇಟೆ: ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ನವೆಂಬರ್1ರಂದು ಕರಾಳ ದಿನ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದು, ಅದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎಂ.ಇ.ಎಸ್. ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಕರಾಳ ದಿನ ಆಚರಿಸಿ ಗಲಭೆಗಳನ್ನು ಸೃಷ್ಟಿಸಲು ಎಂ.ಇ.ಎಸ್. ಕುತಂತ್ರ ನಡೆಸಿದೆ. ಅದರ ಪಿತೂರಿಗೆ ಕಡಿವಾಣ ಹಾಕಬೇಕು. ಶಾಂತಿ ಕದಡುವವರ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎಚ್. ಶ್ರೀನಿವಾಸ, ನಗರ ಘಟಕದ ಅಧ್ಯಕ್ಷ ಎಸ್.ಎಂ. ಜಾಫರ್, ಕಾರ್ಯಕರ್ತರಾದ ಅಮೀರ್, ಶಂಶುದ್ದೀನ್, ನಾಸೀರ್, ಫಿರೋಜ್, ಅಮರೇಶಪ್ಪ, ಅಮೀದ್, ವಲಿ ಬಾಷಾ, ಖಾಜಾ, ಮಂಜುನಾಥ, ಫಯಾಜ್, ಶಿವಪ್ಪ, ಪ್ರಕಾಶ್ ಇದ್ದರು.