ಕಮಲಾಪುರ:ವೇತನ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ಕಪ್ಪುಪಟ್ಟಿ ಧರಿಸಿ ಪ್ರಥಮ ವರ್ಷದ ಪರೀಕ್ಷಾ ಕಾರ್ಯ ನಿರ್ವಹಿಸಿದರು.
ಉಪನ್ಯಾಸಕ ಸುಭಾಷ ಜಾಧವ ಮಾತನಾಡಿ, ‘ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ ಜಿ.ಕುಮಾರನಾಯಕ ಆಯೋಗ ಉಪನ್ಯಾಸಕರಿಗೆ 4 ವೇತನ ಬಡ್ತಿಗಳನ್ನು ಕೊಡುವಂತೆ ಶಿಫಾರಸು ಮಾಡಿತ್ತು.ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ವೇತನ ಬಡ್ತಿಕೊಡಲಾಗಿದೆ. ಇನ್ನುಳಿದ 3 ವೇತನ ಬಡ್ತಿ ಶೀಘ್ರ ಕೊಡಬೇಕು ಎಂದು ಆಗ್ರಹಿಸಿದರು.
ವರ್ಗಾವಣೆ ನಿಯಮ ಸಡಿಲಗೊಳಿಸುವುದು, ಉಪನ್ಯಾಸಕರ ಹುದ್ದೆಯಿಂದ ಪ್ರಾಂಶುಪಾಲರ ಹುದ್ದೆಗೆ ತ್ವರಿತಗತಿಯಲ್ಲಿ ಬಡ್ತಿ ನೀಡುವುದು ಹಾಗೂ ರಾಜ್ಯ ಉಪನ್ಯಾಸಕರ ಸಂಘದ ನಿರ್ಣಯದಂತೆ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಅವುಗಳನ್ನು ಈಡೇರಿಸುವಲ್ಲಿ ಎಲ್ಲ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ ಈ ಬಾರಿ ಪಿಯುಸಿ ದ್ವಿತೀಯ ವರ್ಷದ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಉಪನ್ಯಾಸಕ ಯಲ್ಲಪ್ಪ ತಳವಾರ, ನಾಗರಾಜ ಮೈಲವಾರ, ಎಸ್ ಎನ್.ಪಾಟೀಲ, ಭೀಮಶೆಟ್ಟಿ ರು ದ್ರಾಕ್ಷಿ, ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಜಿ.ಪಿ.ಭೂಸಾಳೆ ಇದ್ದರು.