ಹೂವಿನಹಡಗಲಿ: ರಾಜ್ಯದಲ್ಲಿರುವ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್ಗಳಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ಕನ್ನಡಿಗರನ್ನೇ ನೇಮಿಸಬೇಕು. ಎಲ್ಲ ಬ್ಯಾಂಕ್ ಸೇವೆಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂದು ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದರು.
ಪಟ್ಟಣದ ಎಲ್ಲ ಬ್ಯಾಂಕ್ ಗಳ ವ್ಯವಸ್ಥಾಪಕರಿಗೆ ಮಂಗಳವಾರ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕರವೇ ಅಧ್ಯಕ್ಷ ಜಿ. ಹಾಲೇಶನಾಯ್ಕ ಮಾತನಾಡಿ, ‘ಹಿಂದಿ ದಿವಸ್’ ಆಚರಣೆಗೆ ತೀವ್ರ ವಿರೋಧವಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರ್ಕಾರದ ಕಚೇರಿ, ಬ್ಯಾಂಕ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಕನ್ನಡ ಬಾರದ ಬ್ಯಾಂಕ್ ಸಿಬ್ಬಂದಿಯನ್ನು ಅವರ ಮಾತೃ ರಾಜ್ಯಗಳಿಗೆ ವರ್ಗಗೊಳಿಸಬೇಕು. ಬ್ಯಾಂಕಿನ್ ಎಲ್ಲ ಅರ್ಜಿ ನಮೂನೆಗಳು ಕನ್ನಡದಲ್ಲೇ ಲಭ್ಯವಿರುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಹಂಪಸಾಗರ ಮಹ್ಮದ್ ರಫಿಕ್, ಎಂ.ಶಿವನಗೌಡ, ವೀರಸಿಂಗ್ ರಾಠೋಡ್, ರಿಯಾಜ್, ಎಚ್.ಉಮೇಶ, ಕೆ.ಶೇಖಪ್ಪ, ಸುಭಾಷ್, ಬಿ.ಶಿವರಾಜ ಇತರರು ಇದ್ದರು.