ತೋರಣಗಲ್ಲು: ಸಮೀಪದ ಕುಡುತಿನಿ ಪಟ್ಟಣಕ್ಕೆ ಕೊರೊನಾ ವೈರಸ್ ಹರಡದಂತೆ ಪಟ್ಟಣದ ನಾಗರಿಕರು ಪಟ್ಟಣದ ಮುಖ್ಯದ್ವಾರದ ಬಾಗಿಲಿಗೆ ನಿಂಬೆಹಣ್ಣು, ಬೇವಿನ ಎಲೆ, ತೆಂಗಿನಕಾಯಿ ಹಾಗೂ ಮೆಣಸಿನಕಾಯಿ ಇರುವ ಬೃಹತ್ ಹಾರವನ್ನು ಕಟ್ಟಿ ಧಾರ್ಮಿಕ ದಿಗ್ಬಂಧನ ಮಂಗಳವಾರ ವಿಧಿಸಿದ್ದಾರೆ.
ಪಟ್ಟಣದ ಹಿರಿಯ ನಾಗರಿಕ ಹನುಮೇಶಿ ಮಾತನಾಡಿ, ‘ಕುಡುತಿನಿ ಪಟ್ಟಣದಲ್ಲಿ ಕೊರೊನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿದ್ದು, ಬಹಳಷ್ಟು ಮಂದಿ ಮೃತಪಟ್ಟಿದ್ದಾರೆ. ಇದನ್ನು ತಡೆಯಲು ಹಾಗೂ ಪಟ್ಟಣದ ಜನರಿಗೆ ದೈವತ್ವದ ಶಕ್ತಿಯು ಕಾಪಾಡಲಿ ಎನ್ನುವ ದೃಷ್ಟಿಯಿಂದ ಪಟ್ಟಣದ ಒಟ್ಟು ಏಳು ಮುಖ್ಯ ದ್ವಾರ ಬಾಗಿಲುಗಳಿಗೆ ಧಾರ್ಮಿಕ ವಿಧಿ ವಿಧಾನದಿಂದ ದಿಗ್ಬಂಧನದ ಹಾರಗಳನ್ನು ಕಟ್ಟಲಾಗಿದೆ’ ಎಂದರು.
‘ಪ್ರತಿ ದ್ವಾರ ಬಾಗಿಲು ಬಳಿಯಲ್ಲಿನ ಬುಡ್ಡೆಕಲ್ಲು ದೇವರಿಗೆ ಹೂ, ಹಣ್ಣು, ಕಾಯಿಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ, ಹನ್ನೊಂದು ತನುಬಿಂದಿಗೆಗಳ ಜಲ ಸಹ ಸಮರ್ಪಿಸಲಾಗಿದೆ’ ಎಂದರು.
‘ಪಟ್ಟಣದ ಶಕ್ತಿ ದೇವತೆಗಳಾದ ಯಲ್ಲಮ್ಮ, ದ್ಯಾವಮ್ಮ, ದುರುಗಮ್ಮ, ಸುಂಕ್ಲಮ್ಮ ಹಾಗೂ ಪೆದ್ದಮ್ಮ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದಲ್ಲಿ ಧಾರ್ಮಿಕ ಶಾಂತಿ ನೆಲೆಸುವಂತೆ ಬೇಡಿಕೊಳ್ಳಲಾಗಿದೆ’ ಎಂದು ಪಟ್ಟಣದ ಮತ್ತೊಬ್ಬ ಹಿರಿಯ ನಾಗರಿಕ ಪ್ರಸಾದ್ ಹೇಳಿದರು.
ಪಟ್ಟಣದ ಮಹಿಳೆಯರು ಕಳಸ ಹಿಡಿದು ಹೂ, ಹಣ್ಣು, ಕರ್ಪೂರ ಮತ್ತು ತೆಂಗಿನ ಕಾಯಿಗಳೊಂದಿಗೆ ಪಟ್ಟಣದ ಏಳು ಅಗಸೆಗಳಿಗೆ ತೆರಳಿ, ಅಗಸೆಗಳಲ್ಲಿನ ಬುಡ್ಡೆಕಲ್ಲು ದೇವರಿಗೆ ಜಲಾಭಿಷೇಕ ಮಾಡಿದರು. ವಿವಿಧ ಭಂಡಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ನಾಗರಿಕರಾದ ಬಾಬಣ್ಣ, ಗಾದಿಲಿಂಗಪ್ಪ, ಭೀಮೇಶಿ, ಜಡೆಪ್ಪ, ರಾಜಣ್ಣ, ಗೋವಿಂದಪ್ಪ ಇದ್ದರು.