ಹೊಸಪೇಟೆ: ಸ್ವಚ್ಛ ಭಾರತ ಆಂದೋಲನದ ಯಶಸ್ವಿಗೆ ಎಲ್ಲ ಸರ್ಕಾರಿ ಕಚೇರಿಗಳು ಕೈಜೋಡಿಸಬೇಕೆಂದುಆದರ್ಶ ಮಹಿಳಾ ಸಂಘ ಮನವಿ ಮಾಡಿದೆ.
ಈ ಸಂಬಂಧ ಸಂಘದ ಸದಸ್ಯರು ಗುರುವಾರ ನಗರಸಭೆ ಪೌರಾಯುಕ್ತ ವಿ. ರಮೇಶ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದರು.
‘ಸ್ವಚ್ಛ ಭಾರತ ಆಂದೋಲನಕ್ಕೆ ಎಲ್ಲರೂ ಕೈಜೋಡಿಸಿದರಷ್ಟೇ ಯಶಸ್ವಿಯಾಗಲು ಸಾಧ್ಯ. ಅದರಲ್ಲೂ ಸರ್ಕಾರಿ ಕಚೇರಿಗಳ ಪಾತ್ರ ಮಹತ್ವದ್ದಾಗಿದೆ. ದೈನಂದಿನ ಕೆಲಸಗಳ ಜತೆಗೆ ಸುತ್ತಮುತ್ತಲಿನ ಪರಿಸರ, ಜನಜೀವನದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುವ ಕೆಲಸ ಸರ್ಕಾರಿ ಕಚೇರಿಗಳು ಮಾಡಬೇಕು’ ಎಂದು ಕೋರಿದರು.
ಸಂಘದ ಅಧ್ಯಕ್ಷೆ ಸುನೀತಾ, ಸದಸ್ಯರಾದ ಲಕ್ಷ್ಮಿ, ವಿಕಾಸ ಯುವಕ ಮಂಡಳ ಅಧ್ಯಕ್ಷ ಗೋಸಲ ಬಸವರಾಜ್, ಸದಸ್ಯರಾದ ನಾಗರಾಜ್, ರಿಯಾಜ್, ಪ್ರಶಾಂತ, ಸುರೇಶ್, ಪವನ್, ಅಕ್ಷಯ್, ಚಂದ್ರು ಇದ್ದರು.