ಬಳ್ಳಾರಿ:ನಗರದ ಕೌಲ್ ಬಜಾರ್ ಪ್ರದೇಶದ ಮೊದಲ ರೈಲು ಗೇಟ್ ಸಮೀಪದ ಜ್ಯೋತಿ ಆಯಿಲ್ ಸ್ಯಾಡಿಕೆಟ್ ಪೆಟ್ರೋಲ್ ಬಂಕ್ನಲ್ಲಿ ನೀರು ಮಿಶ್ರಿತ ಪೆಟ್ರೋಲ್ ಮಾರಲಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸಿರುವ ವೀಡಿಯೋ ಗುರುವಾರ ವೈರಲ್ ಆಗಿದೆ.
ಬಾಟಲ್ಗೆ ಪೆಟ್ರೋಲ್ ಹಾಕಿಸಿಕೊಂಡು ಅದರಲ್ಲಿ ನೀರಿನ ಪ್ರಮಾಣ ಹೆಚ್ಚಿದೆ ಎಂದು ತೋರಿಸುತ್ತಾ ದೂರಿರುವ ಬೈಕ್ ಸವಾರರು ದೃಶ್ಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲುಷಿತ ಪೆಟ್ರೋಲ್ ನಿಂದಾಗಿ ದಾರಿ ಮಧ್ಯೆ ಏಕಾಏಕಿ ವಾಹನಗಳು ಕೆಟ್ಟು ನಿಂತರೆ ಅಪಘಾತಗಳಾಗುತ್ತವೆ. ಅದಕ್ಕೆ ಪೆಟ್ರೋಲ್ ಬಂಕ್ ಮಾಲೀಕರು ಜವಾಬ್ದಾರರಾಗುತ್ತಾರೆಯೇ ಎಂದೂ ಪ್ರಶ್ನಿಸಿದ್ದಾರೆ.
ಸ್ಥಳಕ್ಕೆ ಬಂದ ಬಂಕ್ ಮಾಲೀಕರು, 'ಪೆಟ್ರೋಲ್ ಗೆ ನೀರು ಬೆರಕೆ ಮಾಡಿಲ್ಲ. ಕೆಲವು ದಿನದಿಂದ ಮಳೆಯಾಗುತ್ತಿರುವುದರಿಂದ ಪೈಪ್ ಮುಖಾಂತರ ನೀರು ಸೋರಿಕೆಯಾಗಬಹುದು. ಕೂಡಲೇ ಸರಿಪಡಿಸಲಾಗುವುದು ಎಂದು ಹೇಳಿರುವ ದೃಶ್ಯವೂ ವೀಡಿಯೋದಲ್ಲಿದೆ.