ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿ ಮತ್ತೆ ಮೌನಕ್ಕೆ ಜಾರಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತವು ಶನಿವಾರ, ಭಾನುವಾರ ಹಂಪಿಯ ಎಲ್ಲ ಸ್ಮಾರಕಗಳ ವೀಕ್ಷಣೆಯನ್ನು ನಿರ್ಬಂಧಿಸಿದೆ. ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಹಂಪಿಯಲ್ಲಿ ಭಾನುವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಪ್ರವಾಸಿಗರು ಹಂಪಿಗೆ ಬರದಂತೆ ತಡೆಯಲು ಕಮಲಾಪುರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ, ಬಂದೋಬಸ್ತ್ ಮಾಡಲಾಗಿದೆ. ಸ್ವತಃ ಹಂಪಿ ಠಾಣೆ ಸಿಪಿಐ ದೊಡ್ಡಣ್ಣ ಅವರು ಭಾನುವಾರ ಸ್ಥಳದಲ್ಲಿದ್ದರು. ಇನ್ನು, ಕಡ್ಡಿರಾಂಪುರ ಬಳಿಯೂ ಪ್ರವಾಸಿಗರು ಬರದಂತೆ ತಡೆಯಲಾಗುತ್ತಿದೆ.
ವಾರಾಂತ್ಯಕ್ಕೆ ರಜೆ ಇರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಬಂದಿದ್ದರು. ಆದರೆ, ನಿರ್ಬಂಧ ಹೇರಿರುವ ವಿಷಯ ತಿಳಿದು, ವಾಪಸಾದರು. ಕೆಲವರು ಏನಾದರಾಗಲಿ ಒಂದು ಸಲ ಪ್ರಯತ್ನಿಸೋಣ ಎಂದು ಹಂಪಿ ಸಮೀಪ ಹೋಗಿ ಹಿಂತಿರುಗಿದರು.
ಪ್ರವಾಸಿಗರೇ ಇಲ್ಲದ ಕಾರಣ ರಥಬೀದಿ ಹಾಗೂ ಪ್ರಮುಖ ಸ್ಮಾರಕಗಳ ಪರಿಸರ ಬಿಕೋ ಎನ್ನುತ್ತಿತ್ತು. ಇಡೀ ಪರಿಸರ ಶಾಂತವಾಗಿತ್ತು.