ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾ, ಭಕ್ತಿಯಿಂದ ಜನ ಮಾಡಿದರು.
ಮನೆಗಳಲ್ಲಿ ಕಬ್ಬು, ಬಾಳೆ ದಿಂಡು, ಹೂಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಿ, ಅದರಲ್ಲಿ ಮಹಾಲಕ್ಷ್ಮಿ ಚಿತ್ರವಿಟ್ಟು ವಿಶೇಷ ಪೂಜೆ ಸಲ್ಲಿ, ಆರತಿ ಬೆಳಗಿದರು. ಬಳಿಕ ನೈವೇದ್ಯ ಸಮರ್ಪಿಸಿದರು.
ಹಬ್ಬದ ನಿಮಿತ್ತ ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬಂತು. ಮಹಿಳೆಯರು ಬೆಳಿಗ್ಗೆಯೇ ಮನೆ ಎದುರು ರಂಗೋಲಿ ಹಾಕಿ, ತೋರಣ ಕಟ್ಟಿದರು. ಹೊಸ ಬಟ್ಟೆಗಳನ್ನು ಧರಿಸಿಕೊಂಡು, ಸುತ್ತಮುತ್ತಲಿನ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಪೂಜೆ ಮಾಡಿದರು. ಬಳಿಕ ಊಟ, ಉಪಾಚಾರಕ್ಕೆ ವ್ಯವಸ್ಥೆ ಮಾಡಿದರು.
ಸಂಜೆ ಮಹಿಳೆಯರು ಮನೆ ಮನೆಗೆ ಹೋಗಿ ಹೂ, ಹಣ್ಣು, ಅರಿಶಿಣ ಕುಂಕುಮ ಕೊಡುತ್ತಿರುವ ದೃಶ್ಯ ಕಂಡು ಬಂತು. ಜನ ದೇವಸ್ಥಾನಗಳಿಗೂ ಹೋಗಿ ಪೂಜೆ ಸಲ್ಲಿಸಿದರು.