ಹೊಸಪೇಟೆ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಸೋಮವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ ಮನಸೂರೆಗೊಳಿಸಿತು.
ಜಾನಪದ ನೃತ್ಯ, ಯುಗಳ ನೃತ್ಯ, ಸಮೂಹ ನೃತ್ಯ, ಶಾಸ್ತ್ರೀಯ ನೃತ್ಯ, ಹಾಡು, ಕೋಲಾಟ, ಡೊಳ್ಳು ಕುಣಿತ, ಶಾಸ್ತ್ರೀಯ ಸಂಗೀತ, ರಂಗ ಗೀತೆ, ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಬಾಲಕಿಯರು, ಯುವತಿಯರು, ಮಹಿಳೆಯರು ನಡೆಸಿಕೊಟ್ಟರು.
ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು 71 ವರ್ಷದ ಮಹಿಳೆ ಹಾಗೂ ಆರು ವರ್ಷದ ಬಾಲಕಿಯ ಜೊತೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ‘ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿಯೂ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ದೌರ್ಬಲ್ಯಗಳನ್ನು ಬದಿಗಿಟ್ಟು ಸಕಾರಾತ್ಮಕ ಮನೋಭಾವದಿಂದ ಮುನ್ನಡೆಯಬೇಕು. ಹಿರಿಯರನ್ನು ಗೌರವದಿಂದ ಕಂಡು ಕಿರಿಯರನ್ನು ಉತ್ತಮ ಸಂಸ್ಕಾರದೊಂದಿಗೆ ಬೆಳೆಸಬೇಕು’ ಎಂದು ಹೇಳಿದರು.
‘ಪುರುಷರು ಮಹಿಳೆಯರನ್ನು ಹಾಗೂ ಮಹಿಳೆಯರು ಪುರುಷರನ್ನು ಪರಸ್ಪರ ಗೌರವಿಸುತ್ತ ಸರಿಸಮಾನವಾಗಿ ಕಾಣಬೇಕು. ಆಗ ಸದೃಢ ಸಮಾಜ ರೂಪುಗೊಳ್ಳುತ್ತದೆ’ ಎಂದು ತಿಳಿಸಿದರು.
ಕಲಾವಿದೆ ಕೂಡ್ಲಿಗಿ ಪದ್ಮ, ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮೂಲಕ ಎಲ್ಲ ಹೆಣ್ಣು ಮಕ್ಕಳಿಗೆ ವೇದಿಕೆ ಕಲ್ಪಿಸಿರುವುದು ಉತ್ತಮ ಬೆಳೆವಣಿಗೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ, ದೊಡ್ಡಬಸವ ಗವಾಯಿ, ಕಲಾವಿದ ಮಂಜುನಾಥ ಗೊವಿಂದವಾಡ, ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಭರತನಾಟ್ಯ ಕಲಾವಿದೆ ಅಂಜಲಿ, ಪುಷ್ಪಾ ರಮೇಶ, ನಾಗರತ್ನ ಇದ್ದರು.