ಕೊಟ್ಟೂರು: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳ ಸಾಧನೆ ಮೆಚ್ಚುವಂತದ್ದು ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣ ಶ್ರೀ ಗುರುದೇವ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಪೂರ್ಣಾಂಕ ಪಡೆದ ವಿದ್ಯಾರ್ಥಿನಿ ಕವನ ಅವರ ಮನೆಗೆ ಸೋಮವಾರ ತೆರಳಿ ಅಭಿನಂದಿಸಿದರು.
ನಂತರ ಸಮೀಪದ ಅಗ್ರಹಾರ ಗ್ರಾಮದಲ್ಲಿ ಇನ್ನೊಬ್ಬ ಪೂರ್ಣಾಂಕ ಪಡೆದ ವಿದ್ಯಾರ್ಥಿನಿ ವಿದ್ಯಾಶ್ರೀ ಮನೆಗೂ ತೆರಳಿ ಅಭಿನಂದಿಸಿ ಮಾತನಾಡಿ, ಸೌಲಭ್ಯಗಳ ಕೊರತೆ ಇದ್ದರೂ ಉತ್ತಮವಾಗಿ ಅಭ್ಯಾಸ ಮಾಡಿ ಪೂರ್ಣಾಂಕ ಪಡೆದಿರುವುದು ಸಾಧನೆಯೇ ಸರಿ ಎಂದರು.
ನಂತರ ಬೋರನಹಳ್ಳಿ ಗ್ರಾಮದ ರೈತ ಎಂ.ಮೂಗಪ್ಪನ ಮನೆಗೆ ತೆರಳಿ ಇಂದು ಕನ್ನಡ ಮಾದ್ಯಮ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿ 624 ಅಂಕಗಳನ್ನು ಪಡೆದ ಎಂ.ಕನಕ ಅವರನ್ನೂ ಅಭಿನಂದಿಸಿ ತಂದೆ ತಾಯಿ ಇಬ್ಬರೂ ಅವಿದ್ಯಾವಂತರಾಗಿದ್ದರೂ ಇವರ ಮಗಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ನನಗೆ ಸಂತಸ ತಂದಿದೆ ಎಂದರು.