ಬೆಂಗಳೂರು: ₹ 40 ಲಕ್ಷಕ್ಕೆ ಬೇಡಿಕೆ ಇರಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾರತ್ತಹಳ್ಳಿ ಠಾಣೆಯ ಪಿಎಸ್ಐ ರಂಗೇಶ್ ಹಾಗೂ ಕಾನ್ಸ್ಟೆಬಲ್ಗಳಾದ ಮಹದೇವಸ್ವಾಮಿ, ಮಹೇಶ್ ಬಂಧನಕ್ಕೆ ಎರಡು ಪ್ರತ್ಯೇಕ ತಂಡ ರಚಿಸಲಾಗಿದೆ.
ಬಾಗಲೂರು ಠಾಣೆಯಲ್ಲಿ ದಾಖಲಾಗಿದ್ದ ರಾಮಾಂಜನಿ ಎಂಬುವವರ ಅಪಹರಣ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು, ಮಾರತ್ತಹಳ್ಳಿ ಠಾಣೆಯ ಹೆಡ್ ಕಾನ್ಸ್ಟೆಬಲ್ ಹರೀಶ್ ಸೇರಿ ಮೂವರನ್ನು ಈಗಾಗಲೇ ಬಂಧಿಸಿದ್ದಾರೆ.
‘ಹುಲಿ ಚರ್ಮ, ಉಗುರು ಮಾರಾಟ ನೆಪದಲ್ಲಿ ರಾಮಾಂಜನಿ ಅವರನ್ನು ವಶಕ್ಕೆ ಪಡೆದಿದ್ದ ಪಿಎಸ್ಐ ಹಾಗೂ ಇತರರು, ಅಕ್ರಮ ಬಂಧನದಲ್ಲಿಟ್ಟು ₹ 40 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಪ್ರಮುಖ ಆರೋಪಿ ರಂಗೇಶ್ ಹಾಗೂ ಕಾನ್ಸ್ಟೆಬಲ್ಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ’ ಎಂದು ಬಾಗಲೂರು ಪೊಲೀಸರು ಹೇಳಿದರು.
‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ರಂಗೇಶ್ ಹುಟ್ಟೂರಿಗೂ ವಿಶೇಷ ತಂಡ ಹೋಗಿದೆ. ಆದರೆ, ಪಿಎಸ್ಐ ಅಲ್ಲಿಲ್ಲ. ಬಂಧನ ಭೀತಿಯಿಂದ ನಗರದಿಂದ ನಗರಕ್ಕೆ ಸ್ಥಳ ಬದಲಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ’ ಎಂದರು.
ವಂಚನೆ ಪ್ರಕರಣ ದಾಖಲು: ‘ನಕಲಿ ಚರ್ಮ, ಉಗುರುಗಳನ್ನು ಅಸಲಿ ಎಂಬುದಾಗಿ ಬಿಂಬಿಸಿ ಸಾರ್ವಜನಿಕರಿಗೆ ಮಾರಲು ಯತ್ನಿಸುತ್ತಿದ್ದ ಆರೋಪದಡಿ ಸಿದ್ದಮಲ್ಲಪ್ಪ ಹಾಗೂ ರಾಮಾಂಜನಿ ವಿರುದ್ಧ ಮಾರತ್ತಹಳ್ಳಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಅದರ ವಿಚಾರಣೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.