ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 42,500 ದಂಡ; ಪೊಲೀಸರಿಗೆ ವಾಹನ ಕೊಟ್ಟು ಹೋದ ಸವಾರ

Last Updated 30 ಅಕ್ಟೋಬರ್ 2020, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೈಕ್ ಸವಾರರೊಬ್ಬರಿಗೆ ₹42,500 ದಂಡ ವಿಧಿಸಲಾಗಿದೆ. ಆ ಮೊತ್ತ ಪಾವತಿಸಲಾಗದೇ ಸವಾರ, ದ್ವಿಚಕ್ರ ವಾಹನವನ್ನೇ ಪೊಲೀಸರಿಗೆ ಕೊಟ್ಟು ಹೋಗಿದ್ದಾರೆ.

‘ನಗರದ ನಿವಾಸಿ ಅರುಣ್‌ಕುಮಾರ್ ಎಂಬುವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಿಂದ 77 ಬಾರಿ ಸಂಚಾರ ನಿಯಮ ಉಲ್ಲಂಘನೆ ಆಗಿತ್ತು. ಹೀಗಾಗಿ, ದಂಡ ವಿಧಿಸಿ ರಶೀದಿ ನೀಡಲಾಗಿದೆ. ವಾಹನ ಜಪ್ತಿ ಮಾಡಲಾಗಿದೆ. ವಾಹನ ಬಿಡಿಸಿಕೊಂಡು ಹೋಗಲು ಇದುವರೆಗೂ ಠಾಣೆಗೆ ಬಂದಿಲ್ಲ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆಗಾಗಿ ಮಡಿವಾಳ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ನವೀನ್‌ಕುಮಾರ್ ನಿರ್ದೇಶನದಂತೆ ಪಿಎಸ್‌ಐ ಶಿವರಾಜ್‌ಕುಮಾರ್ ಅಂಗಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು.’

‘ಮಡಿವಾಳ ವೃತ್ತದಲ್ಲಿ ಬಂದ ಅರುಣ್‌ಕುಮಾರ್ ಅವರ ದ್ವಿಚಕ್ರ ವಾಹನ ತಡೆದು ತಪಾಸಣೆ ನಡೆಸಿದ್ದರು. ಅರುಣ್‌ಕುಮಾರ್ ಇದುವರೆಗೂ 77 ಬಾರಿ ನಿಯಮ ಉಲ್ಲಂಘಿಸಿದ್ದು ತಪಾಸಣೆ ವೇಳೆ ಗೊತ್ತಾಗಿತ್ತು. ಅವರಿಗೆ ಸ್ಥಳದಲ್ಲೇ ದಂಡದ ರಶೀದಿ ನೀಡಿ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.’

ದಂಡವೇ ಹೆಚ್ಚು: ಸವಾರ ಅರುಣ್‌ಕುಮಾರ್, ಸೆಕೆಂಡ್ ಹ್ಯಾಂಡ್‌ ದ್ವಿಚಕ್ರ ವಾಹನ ಖರೀದಿಸಿದ್ದರು. ಅದರ ಮೌಲ್ಯ ಸದ್ಯ ₹ 20 ಸಾವಿರದಿಂದ ₹ 30 ಸಾವಿರ ಇದೆ. ಅದಕ್ಕಿಂತ ದಂಡವೇ ಹೆಚ್ಚಿದೆ. ಹೀಗಾಗಿಯೇ ದಂಡದ ರಶೀದಿ ತೆಗದುಕೊಂಡು ಹೋದ ಸವಾರ, ವಾಪಸು ಬಂದಿಲ್ಲ. ಆತ ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಬೇಕು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT